ಶ್ಲೋಕ – 07
ಶ್ಲೋಕ – 07
ಯಸ್ತ್ವಿಂದ್ರಿಯಾಣಿ ಮನಸಾ ನಿಯಮ್ಯಾsರಭತೇsರ್ಜುನ ।
ಕರ್ಮೇಂದ್ರಿಯೈಃ ಕರ್ಮಯೋಗಮಸಕ್ತಃ ಸ ವಿಶಿಷ್ಯತೇ ॥೭॥
ಯಃ ತು ಇಂದ್ರಿಯಾಣಿ ಮನಸಾ ನಿಯಮ್ಯ ಆರಭತೇ ಅರ್ಜುನ ಕರ್ಮ ಇಂದ್ರಿಯೈಃ ಕರ್ಮಯೋಗಮ್ ಅಸಕ್ತಃ ಸ ವಿಶಿಷ್ಯತೇ-ಓ ಅರ್ಜುನ, ಇಂದ್ರಿಯಗಳನ್ನು ಮನೋಬಲದಿಂದ ಗೆದ್ದು, ಫಲದ ನಂಟು ತೊರೆದು, ಇಂದ್ರಿಯಗಳ ಮೂಲಕ ಸಾಧನೆಯಲ್ಲಿ ತೊಡಗುವವನು ಮಿಗಿಲಾದವನು.
ಮನಸ್ಸು ಸ್ವಚ್ಛವಾಗಿದ್ದು, ಇಂದ್ರಿಯಗಳ ಮೇಲೆ ಮಾನಸಿಕ ಕಡಿವಾಣ ಗಟ್ಟಿಯಿದ್ದಾಗ- ಕರ್ಮೆಂದ್ರಿಯದಿಂದ ಮಾಡುವ ಸಾಧನೆ ಕರ್ಮಯೋಗವಾಗುತ್ತದೆ. ಇದು ಶುದ್ಧ ಅಧ್ಯಾತ್ಮ ಸಾಧನೆ. ಈ ಸ್ಥಿತಿಯಲ್ಲಿ ಇಂದ್ರಿಯಗಳು ದಾರಿ ತಪ್ಪುವುದಿಲ್ಲ. ತನ್ನ ಜೀವ ಸ್ವರೂಪದ ಸ್ವಭಾವಕ್ಕನುಗುಣವಾಗಿ ಚತ್ತ ಶುದ್ಧಿಯಿಂದ ಮಾಡುವ ಕರ್ಮ ನಿಜವಾದ ಅಧ್ಯಾತ್ಮ ಸಾಧನೆ. ಈ ರೀತಿಯ ಸಾಧನೆಯಲ್ಲಿ ತೊಡಗುವವನು ಶ್ರೇಷ್ಠನೆನಿಸುತ್ತಾನೆ. ಇಂತವರು ಒಳಗೊಂದು-ಹೊರಗೊಂದು ಆಗಿರದೆ, ಮನೋಬಲದಿಂದ ಇಂದ್ರಿಯಗಳನ್ನು ಗೆದ್ದು, ಫಲದ ನಂಟನ್ನು ತೊರೆದು, ಎತ್ತರಕ್ಕೇರುತ್ತಾರೆ.