• 27 ಮಾರ್ಚ್ 2025

ವಾಮ ಮಾರ್ಗದಲ್ಲಿ ಒಳ ನುಸುಳುತ್ತಿದೆ ಅಡಿಕೆ, ಧಾರಣೆ ಭಾರೀ ಇಳಿಮುಖ, ಭಯದಲ್ಲಿ ಅಡಿಕೆ ಬೆಳೆಗಾರರು 

 ವಾಮ ಮಾರ್ಗದಲ್ಲಿ ಒಳ ನುಸುಳುತ್ತಿದೆ ಅಡಿಕೆ, ಧಾರಣೆ ಭಾರೀ ಇಳಿಮುಖ, ಭಯದಲ್ಲಿ ಅಡಿಕೆ ಬೆಳೆಗಾರರು 
Digiqole Ad

ವಾಮ ಮಾರ್ಗದಲ್ಲಿ ಒಳ ನುಸುಳುತ್ತಿದೆ ಅಡಿಕೆ, ಧಾರಣೆ ಭಾರೀ ಇಳಿಮುಖ, ಭಯದಲ್ಲಿ ಅಡಿಕೆ ಬೆಳೆಗಾರರು

ಎರಡು ವರ್ಷ ಹಿಂದೆ 500 ರೂ.ಗಳ ಗಡಿ ದಾಟಿ ದಾಖಲೆ ಮಾಡಿದ್ದ ಮಂಗಳೂರು ಅಡಿಕೆ ದರ ಇದೀಗ ಇಳಿಮುಖವಾಗುತ್ತಿದೆ. ಆಮದು ಪ್ರಮಾಣ ಹೆಚ್ಚಳ ಮತ್ತು ಕಳ್ಳ ಮಾರ್ಗದಲ್ಲಿ ಅಡಿಕೆ ಒಳ ಬರುತ್ತಿರುವುದರಿಂದ ದರ ಕುಸಿತ ಕಂಡಿದ್ದು ಬೆಳೆಗಾರರನ್ನು ಆತಂಕಕ್ಕೆ ತಳ್ಳಿದೆ. ಪ್ರಸ್ತುತ ಈ ಅವಧಿಯಲ್ಲಿ ಕೊಯ್ಲು ಆರಂಭಗೊಳ್ಳುವಾಗ 370 ರೂಪಾಯಿ ಇದ್ದ ಕೆಜಿ ಅಡಕೆ ದರ ಇದೀಗ ಕ್ಯಾಂಪ್ಕೋದಲ್ಲಿ 330 ರಿಂದ 340 ರೂಪಾಯಿ ಆಸುಪಾಸಿನಲ್ಲಿ ಖರೀದಿಯಾಗುತ್ತಿದೆ.

ಎರಡು ವರ್ಷ ಹಿಂದೆ 500 ರೂ.ಗಳ ಗಡಿ ದಾಟಿ ದಾಖಲೆ ನಿರ್ಮಿಸಿದ್ದ ಮಂಗಳೂರು ಅಡಕೆ ದರ ಇಳಿಮುಖವಾಗಿದ್ದು, ಈಗ ಬೆಳೆಗಾರರನ್ನು ಆತಂಕಕ್ಕೆ ತಳ್ಳಿದೆ. ಅಡಕೆ ತೋಟದಲ್ಲಿ 3 ಮತ್ತು 4ನೇ ಕೊಯ್ಲು ಕೂಡ ಮುಗಿಯುತ್ತಾ ಹಾಲಿ ವರ್ಷದ ಬೆಳೆ ಮುಗಿಯುತ್ತಾ ಬರುತ್ತಿದ್ದಂತೆ ಇತ್ತ ಮಾರುಕಟ್ಟೆಯಲ್ಲಿ ದಿನದಿಂದ ದಿನಕ್ಕೆ ಧಾರಣೆ ಇಳಿಯುತ್ತಿರುವುದು ಭವಿಷ್ಯದ ಮೇಲೆ ಭಯದ ಛಾಯೆ ಮೂಡಿಸಿದೆ.

 ಮಂಗಳೂರು ಚಾಲಿ ಹೊಸ ಅಡಕೆ ಕ್ಯಾಂಪ್ಕೋದಲ್ಲಿ ಕೆಜಿಗೆ 330u ರಿಂದ 340 ರೂ. ಆಸುಪಾಸಿನಲ್ಲಿ ಖರೀದಿಯಾಗುತ್ತಿದೆ. ಖಾಸಗಿ ಮಾರುಕಟ್ಟೆಯಲ್ಲಿ ಕೆಲವೆಡೆ 320 ರೂ. ಗಳಿದ್ದರೆ, ಇನ್ನು ಕೆಲವೆಡೆ 330 ರೂ. ಇದೆ. ಹಾಲಿ ಋತುಮಾನದ ಕೊಯ್ಲು ಆರಂಭಗೊಳ್ಳುವಾಗ 370 ರೂ. ಆಸುಪಾಸಿನಲ್ಲಿದ್ದ ಹೊಸ ಅಡಿಕೆ ಧಾರಣೆ ಈಗ 340 ರೂ.ಗೆ ಬಂದು ನಿಂತಿದೆ. 500 ರೂ.ಗಳ ಗಡಿ ದಾಟಿ ಇತಿಹಾಸ ಸೃಷ್ಟಿಸಿದ್ದ ಹಳೆ ಅಡಕೆ ಈಗ 370ಕ್ಕೆ ಖರೀದಿಯಾಗುತ್ತಿದೆ.

ಅಡಕೆ ಕಳ್ಳಸಾಗಾಟ ನಿರಾoತಕ ವಿದೇಶದಿಂದ ಅಡಕೆ ಆಮದು ಪ್ರಕ್ರಿಯೆ ನಿಲ್ಲಿಸಬೇಕೆಂಬ ರೈತರ ಬಹುಕಾಲದ ಆಗ್ರಹ ಇನ್ನೂ ಈಡೇರಿಲ್ಲವಾದರೂ, ಕನಿಷ್ಠ ಆಮದು ದರ 350 ರೂ. ಮಿತಿ ನಿಗದಿ ಮಾಡಿ ಕೇಂದ್ರ ಸರಕಾರ ಆದೇಶ ಹೊರಡಿಸಿತ್ತು. ಹೀಗಾಗಿ 350 ರೂ.ಗಿಂತಲೂ ಕಡಿಮೆ ದರದಲ್ಲಿ ಅಡಕೆ ಆಮದಾಗದಂತಹ ಸನ್ನಿವೇಶ ನಿರ್ಮಿಸಲಾಗಿತ್ತು.

ಆದರೆ ಆಮದು ಪ್ರಮಾಣ ಹೆಚ್ಚಳ ಮತ್ತು ಕಳ್ಳ ಮಾರ್ಗದಲ್ಲಿ ಅಡಕೆ ಒಳ ನುಸುಳುತ್ತಿರುವುದರಿಂದ ದೇಸೀ ಅಡಕೆ ಮಾರುಕಟ್ಟೆ ಮೇಲೆ ಮಾರಕ ಹೊಡೆತ ಬೀಳುತ್ತಿದೆ ಎಂಬ ಅಭಿಪ್ರಾಯವಿದೆ.

ಒಣಹಣ್ಣು (ಡ್ರೈ ಫ್ರುಟ್ಸ್‌) ರೂಪದಲ್ಲಿ ವಿದೇಶದಿಂದ ಅಡಕೆ ಮಂಗಳೂರಿಗೆ ಬರುತ್ತಿದೆ. ಒಂದು ಪಾಲು ಅಧಿಕೃತ ಆಮದಾದರೆ, 10 ಪಾಲು ಅನಧಿಕೃತ ನುಸುಳುವಿಕೆಯಾಗಿದೆ. ಇದು ಕಳಪೆ ಗುಣಮಟ್ಟದ ಅಡಕೆ ಎಂಬುದು ಮತ್ತೊಂದು ದುರಂತ. ಈ ಅಡಕೆಯನ್ನು ಮಂಗಳೂರಿನಲ್ಲಿ ಸ್ಥಳೀಯ ಅಡಕೆ ಜತೆ ಮಿಶ್ರಣ ಮಾಡಿ ಗುಜರಾತ್ ಸೇರಿದಂತೆ ಉತ್ತರ ಭಾರತಕ್ಕೆ ಕಳಿಸುವ ದಂಧೆ ನಡೆಯುತ್ತಿದೆ. ಇದನ್ನು ತಡೆಯುವ ಕೆಲಸ ಆಗುತ್ತಿಲ್ಲ ಎನ್ನುತ್ತಾರೆ ರೈತ ಸಂಘದ ಮುಖಂಡ ರೂಪೇಶ್ ರೈ ಅಲಿಮಾರ್.

ಪರಿಸ್ಥಿತಿ ಇದೇ ರೀತಿ ಇದ್ದರೆ ಅಡಕೆ ಧಾರಣೆಯೂ ಬಹುತೇಕ ಇದೇ ಮಾದರಿಯಲ್ಲಿ ಮುಂದುವರಿಯಬಹುದೇ ಹೊರತು ಏರುವ ಸಾಧ್ಯತೆ ಕಡಿಮೆ ಎನ್ನುತ್ತಾರೆ ಅಖಿಲ ಭಾರತ ಅಡಕೆ ಬೆಳೆಗಾರರ ಸಂಘದ ಪ್ರಧಾನ ಕಾರ್ಯದರ್ಶಿ ಮಹೇಶ್ ಪುಚ್ಚಪ್ಪಾಡಿ.

ಅಡಕೆ ಆಮದು ದರ 350 ರೂ. ಎಂದು ಕೇಂದ್ರ ಸರಕಾರ ನಿಗದಿ ಮಾಡಿದ ಮೇಲೆ ಅಧಿಕೃತ ಆಮದು ಪ್ರಮಾಣ ಕಡಿಮೆಯಾಗಿದೆ. ಇಡೀ ವರ್ಷದಲ್ಲಿ 30 ಸಾವಿರ ಟನ್ ಮಾತ್ರ ಅಧಿಕೃತ ಆಮದಾಗಿದೆ. ಆದರೆ ಇದರ ಹಲವು ಪಟ್ಟು ಅನಧಿಕೃತವಾಗಿ ಬರುತ್ತಿದೆ. ತಮಿಳುನಾಡಿನ ಬಂದರುಗಳಿಗೆ ತೈಲ ಬ್ಯಾರೆಲ್‌ಗಳಲ್ಲಿ ಅಡಕೆ ತುಂಬಿಸಿ ಕಳುಹಿಸಲಾಗಿದೆ. ವಿದೇಶದಿಂದ ಕಾನೂನುಬಾಹಿರವಾಗಿ ಅಡಕೆ ಬರುವುದನ್ನು ನಿಲ್ಲಿಸಲು ಕ್ರಮ ಕೈಗೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಮತ್ತು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಕ್ಯಾಂಪ್ಕೋ ಪತ್ರ ಬರೆದಿದೆ.

ಪತ್ರ ತಲುಪಿದ ಬಗ್ಗೆ ಹಿಂಬರಹವೂ ಬಂದಿದೆ. ಅನೇಕ ಬಾರಿ ಕಾನೂನುಬಾಹಿರ ಅಡಕೆ ಪತ್ತೆ ಹಚ್ಚಲಾಗಿದೆ. 4,800 ಟನ್ ಅಕ್ರಮ ಅಡಕೆ ಒಳ ನುಸುಳಿರುವುದನ್ನು ಸರಕಾರ ಅಧಿಕೃತವಾಗಿ ಸಂಸತ್‌ನಲ್ಲಿ ತಿಳಿಸಿದೆ. ಅನಧಿಕೃತ ನುಸುಳುವಿಕೆ ನಿಂತರೆ ಸ್ಥಳೀಯ ಅಡಕೆಗೆ ಧಾರಣೆ ಏರಬಹುದು ಎನ್ನುತ್ತಾರೆ ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಲಿ.

Digiqole Ad

ಈ ಸುದ್ದಿಗಳನ್ನೂ ಓದಿ