ಯುವಕನಿಂದ ಬೆದರಿಕೆ,ಆಶ್ಲೀಲ ಮೆಸೇಜ್:ಯುವತಿ ಆತ್ಮಹತ್ಯೆಗೆ ಯತ್ನ;ಅಪಾಯದಿಂದ ಪಾರು
ಯುವಕನಿಂದ ಬೆದರಿಕೆ,ಆಶ್ಲೀಲ ಮೆಸೇಜ್:ಯುವತಿ ಆತ್ಮಹತ್ಯೆಗೆ ಯತ್ನ;ಅಪಾಯದಿಂದ ಪಾರು
ಫೇಸ್ ಬುಕ್ ಮೆಸೆಂಜರ್ ಮೂಲಕ ಸ್ಥಳೀಯ ಸುರತ್ಕಲ್ ಇಡ್ಯಾದ ಯುವಕ ಶರೀಕ್ ಎಂಬಾತ ಆಶ್ಲೀಲ, ಬೆದರಿಕೆಯ ಮೆಸೇಜ್ ಕಳಿಸಿರುವುದು ಮಾತ್ರವಲ್ಲದೆ ಯುವತಿಯ ಕಡೆಯವರು ಪೊಲೀಸ್ ದೂರು ನೀಡಿದ ಕಾರಣ ಮತ್ತಷ್ಟು ಬೆದರಿಸುವ ಯತ್ನ ನಡೆಸಿದ್ದು ಇದರಿಂದ ಯುವತಿ ನಿದ್ದೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಶುಕ್ರವಾರ ಬೆಳಗ್ಗೆ 3.30 ಗಂಟೆಗೆ ನಡೆದಿದೆ.
ಮಲಗಿದ್ದ ಮಗಳ ಬಳಿ ಪತ್ರ ದೊರಕಿದ್ದು, ಓದಿದಾಗ ಅನುಮಾನಗೊಂಡು ಎಚ್ಚರಿಸಲು ಯತ್ನಿಸಿದಾಗ, ಅರೆಪ್ರಜ್ಞಾವಸ್ಥೆಯಲ್ಲಿರುವುದನ್ನು ಕಂಡು ಮನೆ ಮಂದಿ ತತ್ಕ್ಷಣ ಸ್ಥಳೀಯ ಸಾಮಾಜಿಕ ಕಾರ್ಯಕರ್ತರ ನೆರವಿನಿಂದ ಆಸ್ಪತ್ರೆಗೆ ದಾಖಲಿಸಿದರು. ಸಕಾಲದಲ್ಲಿ ಚಿಕಿತ್ಸೆ ದೊರೆತ ಕಾರಣ ಯುವತಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.
ಅ. 23ರಂದು ಕಿರುಕುಳ ಕುರಿತಂತೆ ಸುರತ್ಕಲ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ತಮಗೆ ಅನುಮಾನವಿರುವ ಯುವಕ ಹಾಗೂ ಆತನ ತಾಯಿಯ ಕುರಿತಾಗಿ ದೂರಿನಲ್ಲಿ ಪೊಲೀಸರಿಗೆ ತಿಳಿಸಲಾಗಿತ್ತು. ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದು ತನಿಖೆ ನಡೆಸಿದರೂ, ಆದರೆ ಸೂಕ್ತ ಸಾಕ್ಷ್ಯಾಧಾರದ ಕೊರತೆಯಿಂದ ಎಚ್ಚರಿಕೆ ನೀಡಿ ಕಳಿಸಿದ್ದರು. ಅ. 25ರಂದು ಮತ್ತೆ ಮೆಸೆಂಜರ್ ಮೂಲಕ ಜೈಲಿಗೆ ಹೋದರೂ ನಿನ್ನ ಬಿಡುವುದಿಲ್ಲ. ಹೊರಗೆ ಬಂದು ಕೊಲ್ಲುವೆ ಎಂಬ ಮೆಸೇಜ್ ಬಂದಿದೆ. ಇದರಿಂದ ಯುವತಿ ಆತಂಕಗೊಂಡು ಈ ಕೃತ್ಯ ಎಸಗಿದ್ದಾಳೆ ಎನ್ನಲಾಗಿದೆ.
ಇಡ್ಯಾದಲ್ಲಿ ಯುವತಿ ಕುಟುಂಬ: ಸುರತ್ಕಲ್ ಇಡ್ಯಾದಲ್ಲಿ ಯುವತಿಯ ಕುಟುಂಬ ನೆಲೆಸಿದ್ದು, ಇತ್ತೀಚೆಗೆ ಯುವತಿ ಅಂಗಡಿಯೊಂದನ್ನು ತೆರೆದಿದ್ದಳು. ಇತ್ತೀಚೆಗೆ ಯುವಕರ ಗುಂಪೊಂದು ಅಂಗಡಿ ಬಳಿ ಬೈಕ್ ನಲ್ಲಿ ಬಂದು ನಿಲ್ಲುವುದು, ಯುವತಿಯನ್ನು ದುರುಗುಟ್ಟಿ ನೋಡುವುದು, ಆಶ್ಲೀಲ ಸನ್ನೆ ಮಾಡಿ ಮಾನಸಿಕವಾಗಿ ಕಿರುಕುಳ ನೀಡುತ್ತಿರುವುದರ ಬಗ್ಗೆಯೂ ಯುವತಿ ಪತ್ರದಲ್ಲಿ ಬರೆದಿದ್ದು ಪೊಲೀಸರು ಈ ಬಗ್ಗೆ ತನಿಖೆ ನಡೆಸಲು ಮುಂದಾಗಿದ್ದಾರೆ.