ಕಾಣಿಯೂರು ವರ್ಗಾವಣೆಗೊಂಡ ಮುಖ್ಯ ಶಿಕ್ಷಕ ಪುಂಡಲೀಕಪ್ಪ ಪೂಜಾರ್ ರವರಿಗೆ ಸನ್ಮಾನ ಕಾರ್ಯಕ್ರಮ
ಕಾಣಿಯೂರು ವರ್ಗಾವಣೆಗೊಂಡ ಮುಖ್ಯ ಶಿಕ್ಷಕ ಪುಂಡಲೀಕಪ್ಪ ಪೂಜಾರ್ ರವರಿಗೆ ಸನ್ಮಾನ ಕಾರ್ಯಕ್ರಮ
ವಿದ್ಯಾರ್ಥಿಗಳು, ಪೋಷಕರು, ಊರಿನ ವಿವಿಧ ಸಂಘ ಸಂಸ್ಥೆಗಳು ನಡೆಸಿರುವ ಇಂದಿನ ಸನ್ಮಾನವೇ ಪುಂಡಲೀಕ ಪೂಜಾರ್ ರವರ ವ್ಯಕ್ತಿತ್ವಕ್ಕೆ ಸಾಕ್ಷಿ ದೂರದ ಬಾದಾಮಿಯಿಂದ ಬಂದು ಹನ್ನೆರಡು ವರ್ಷಗಳ ಕಾಲ ಸೇವೆ ಸಲ್ಲಿಸಿ ತಮ್ಮ ವೃತ್ತಿ ಜೀವನದಲ್ಲಿ ಶಾಲೆಯ ಅಭಿವೃದ್ಧಿಗೆ ತನ್ನನ್ನು ತಾನು ತೊಡಗಿಸಿಕೊಳ್ಳುವ ಇಂತಹ ಮುಖ್ಯ ಗುರುಗಳಿದ್ದರೆ ಸರಕಾರಿ ಶಾಲೆಗಳು ಅಭಿವೃದ್ಧಿ ಹೊಂದುವುದರಲ್ಲಿ ಸಂಶಯವಿಲ್ಲ.ಇವರ ಅವಧಿಯಲ್ಲಿ ಶಾಲೆಯ ಅಭಿವೃದ್ಧಿಯನ್ನು ಕಂಡರೆ ಇಂತಹ ಶಿಕ್ಷಕರಿಗೆ ರಾಜ್ಯ ಪ್ರಶಸ್ತಿ ಸಿಗಬೇಕು ಎಂದು ಸವಣೂರು ಕಾಣಿಯೂರು ರೈತ ಉತ್ಪಾದಕ ಸಹಕಾರ ಸಂಘದ ಅಧ್ಯಕ್ಷರಾದ ಶ್ರೀ ಗಿರಿಶಂಕರ ಸುಲಾಯ ಹೇಳಿದರು.ಅವರು ಕಾಣಿಯೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಗುರುಗಳಾಗಿ ಸೇವೆ ಸಲ್ಲಿಸಿ ವರ್ಗಾವಣೆಗೊಂಡ ಮುಖ್ಯ ಗುರುಗಳಾದ ಪುಂಡಲೀಕಪ್ಪ ಪೂಜಾರ್ ರವರಿಗೆ ಶಾಲಾ ಎಸ್.ಡಿ.ಎಂ.ಸಿ ಮತ್ತು ವಿವಿಧ ಸಂಘ ಸಂಸ್ಥೆಗಳ ವತಿಯಿಂದ ನಡೆದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು. ಮುಖ್ಯ ಗುರುಗಳ ಸಂಘದ ಜಿಲ್ಲಾ ಅಧ್ಯಕ್ಷರಾದ ನಿಂಗರಾಜು ಕೆ.ಪಿ ಮಾತಾಡಿ ಇಂದಿನ ಶಾಲೆಯ ವಾತಾವರಣ ಗಮನಿಸಿದರೆ ಮುಂದೆ ಕೆ.ಪಿ.ಎಸ್ ಅಥವಾ ಪಿ.ಎಂ.ಶ್ರೀ ಶಾಲೆ ಯಾಗುವ ಅವಕಾಶ ಇದೆ.ಇದಕ್ಕೆ ಪುಂಡಲೀಕ ಪೂಜಾರ್ ರವರ ಕಾರ್ಯಗಳು ಸಹಕಾರಿಯಾಗಲಿದೆ ಎಂದರು.
ಇದೇ ವೇಳೆ ಸನ್ಮಾನ ಸ್ವೀಕರಿಸಿ ಮಾತನಾಡಿದ ಮುಖ್ಯ ಗುರುಗಳಾದ ಪುಂಡಲೀಕಪ್ಪ ಪೂಜಾರ್ ರವರು ತನ್ನ ವೃತ್ತಿ ಜೀವನದಲ್ಲಿ ಸಹಕರಿಸಿದ ಎಲ್ಲ ಎಸ್.ಡಿ.ಎಂ.ಸಿ ಅಧ್ಯಕ್ಷರುಗಳನ್ನು ಅವರ ಸಹಕಾರವನ್ನು ನೆನಪಿಸಿ ಕೊಂಡರು.ಮುಖ್ಯ ಗುರುಗಳಾಗಿ ಕರ್ತವ್ಯ ನಿರ್ವಹಿಸಿ ಯಶಸ್ವಿಯಾಗಲು ಸಹಕರಿಸಿದ ಎಲ್ಲ ಸಹೋದ್ಯೋಗಿಗಳಿಗೆ ಕೃತಜ್ಞತೆ ಸಲ್ಲಿಸಿದರು.ಹಾಗಯೇ ವಿದ್ಯಾರ್ಥಿಗಳಿಗೆ ಉತ್ತಮವಾಗಿ ಓದಿ ತಂದೆ ತಾಯಿಗೆ ಒಳ್ಳೆಯ ಹೆಸರು ತಂದು ಉತ್ತಮ ಭವಿಷ್ಯವನ್ನು ರೂಪಿಸಿ ಕೊಳ್ಳಿ ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಪರಮೇಶ್ವರ ಗೌಡ ಅನಿಲ ವಹಿಸಿದ್ದರು.ಕಾರ್ಯಕ್ರಮದ ವೇದಿಕೆಯಲ್ಲಿ ಶ್ರೀಮತಿ ವೇದಾ ಪೂಜಾರ್, ಕಾಣಿಯೂರು ಶ್ರೀ ಲಕ್ಷ್ಮೀನರಸಿಂಹ ಭಜನಾ ಮಂಡಳಿಯ ಗೌರವಾಧ್ಯಕ್ಷರಾದ ಚಿದಾನಂದ ಉಪಾಧ್ಯಾಯ ಕಲ್ಪಡ, ಕಾಣಿಯೂರು ಮಠದ ಮೇನೇಜರ್ ಶ್ರೀನಿಧಿ ಅಚಾರ್, ಕಾಣಿಯೂರು ಗ್ರಾಮ ಪಂಚಾಯತ್ ಸದಸ್ಯರಾದ ರಾಮಣ್ಣ ಗೌಡ ಮುಗರಂಜ, ವಸಂತ ಪೆರ್ಲೋಡಿ, ಲಲಿತಾ ದರ್ಖಾಸು, ಕಾಣಿಯೂರು ಕ್ಲಸ್ಟರ್ ಸಿ.ಅರ್.ಪಿ ಯಶೋಧ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಪದ್ಮಯ್ಯ ಗೌಡ ಅನಿಲ, ಶಾಂತಿಮೊಗರು ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಉತ್ಸವ ಸಮಿತಿಯ ಅಧ್ಯಕ್ಷರಾದ ಚಂದ್ರಶೇಖರ ಬರೆಪ್ಪಾಡಿ, ಬೆಳಂದೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಜಯಂತ ಅಬೀರ, ಸದಸ್ಯರಾದ ಗೌರಿ ಮಾದೋಡಿ, ಎಸ್.ಡಿ.ಎಂ.ಸಿ ಉಪಾಧ್ಯಕ್ಷರಾದ ಯಶೋಧ ನೇರೋಳ್ತಡ್ಕ, ಉಪಸ್ಥಿತರಿದ್ದರು.ಇದೇ ವೇಳೆ ಊರಿನ ಹಲವಾರು ಸಂಘ ಸಂಸ್ಥೆಗಳು, ಮಕ್ಕಳ ಪೋಷಕರು, ವಿದ್ಯಾರ್ಥಿಗಳು ಪುಂಡಲೀಕಪ್ಪ ಪೂಜಾರ್ ರವರನ್ನು ಸನ್ಮಾನಿಸಿದರು.ಮುಖ್ಯ ಗುರುಗಳಾದ ಬಾಲಕೃಷ್ಣ.ಕೆ ಸ್ವಾಗತಿಸಿ, ಅತಿಥಿ ಶಿಕ್ಷಕಿ ದಿವ್ಯಾ.ಪಿ ವಂದಿಸಿದರು.ಸಹ ಶಿಕ್ಷಕಿ ವೀಕ್ಷಿತಾ ಕಾರ್ಯಕ್ರಮ ನಿರೂಪಿಸಿದರು.