ವೀಜಿ ಕಾಸರಗೋಡು ಅವರಿಗೆ ವಿಶೇಷ ರಾಜ್ಯ ಪ್ರಶಸ್ತಿ
ವೀಜಿ ಕಾಸರಗೋಡು ಅವರಿಗೆ ವಿಶೇಷ ರಾಜ್ಯ ಪ್ರಶಸ್ತಿ
ಕಾಸರಗೋಡು : ಪತ್ರಕರ್ತ, ಕಲಾವಿದ ವೀಜಿ.ಕಾಸರಗೋಡು ಅವರು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ನೀಡುವ ಈ ಬಾರಿಯ ವಿಶೇಷ ರಾಜ್ಯ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಗಡಿನಾಡಿನಲ್ಲಿ ಕಳೆದ 25 ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಪತ್ರಿಕೋದ್ಯಮದ ಅನನ್ಯ ಸಾಧನೆಯ ಹಿನ್ನೆಲೆಯಲ್ಲಿ ಈ ಪುರಸ್ಕರಕ್ಕೆ ಅವರು ಅರ್ಹರಾಗಿದ್ದಾರೆ ಎಂದು ಸಂಘದ ರಾಜ್ಯ ಸಮಿತಿ ಅಧ್ಯಕ್ಷ ಶಿವಾನಂದ ತಗಡೂರು ಮತ್ತು ಪ್ರಧಾನ ಕಾರ್ಯದರ್ಶಿ ಬಿ.ಪಿ.ಲೋಕೇಶ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜ.18,19ರಂದು ತುಮಕೂರಿನಲ್ಲಿ ನಡೆಯುವ ಕನ್ನಡ ಪತ್ರಕರ್ತರ 29ನೇ ರಾಜ್ಯಸಮ್ಮೇಳನದಲ್ಲಿ ಅವರಿಗೆ ಪ್ರಶಸ್ತಿ ಪ್ರದಾನ ನಡೆಯಲಿದೆ. ಈಗ ಪ್ರಜಾವಾಣಿ ಯ ಕಾಸರಗೋಡು ಜಿಲ್ಲಾ ವರದಿಗಾರರಾಗಿರುವ ಅವರು, ಹಿಂದೆ ಸುದೀರ್ಘ ಅವಧಿಗೆ ವಿಜಯ ಕರ್ನಾಟಕದ ಕಾಸರಗೋಡು ಜಿಲ್ಲಾ ವರದಿಗಾರರಾಗಿ ಸೇವೆ ಸಲ್ಲಿಸಿದವರು. ಕೇರಳ ವಾರ್ತಾ ಇಲಾಖೆಯಲ್ಲಿ ಕನ್ನಡ ವಿಭಾಗದ ಸಹಾಯಕ ಮಾಹಿತಿ ಅಧಿಕಾರಿಯಾಗಿ ಸತತ 3 ಅವಧಿಯಲ್ಲಿ ಸೇವೆ ಸಲ್ಲಿಸಿದ ಹಿರಿಮೆ ಇವರ ಪಾಲಿಗಿದೆ. ಕನ್ನಡ ಪತ್ರಿಕೋದ್ಯಮದ ವಿವಿಧ ಮಜಲುಗಳಲ್ಲಿ ತಮ್ಮ ಪ್ರತಿಭೆಯನ್ನು ತೋರಿರುವ ಅವರು ಕನ್ನಡ ಭಾಷೆ ಮತ್ತು ಸಂಸ್ಕೃತಿಗೆ ನೀಡಿರುವ ಕೊಡುಗೆ ದೊಡ್ಡದು. ಕನ್ನಡ ಪತ್ರಿಕೋದ್ಯಮ ಮತ್ತು ಯಕ್ಷಗಾನ ಕ್ಷೇತ್ರದ ಪ್ರಧಾನವಾಹಿನಿಯಲ್ಲಿ ಅವರು 25 ವರ್ಷಗಳಿಂದ ಸತತ ಸಾಧನೆಯಲ್ಲಿದ್ದಾರೆ. ತಾಳಮದ್ದಲೆಗಳಲ್ಲಿ ಅರ್ಥಧಾರಿಯಾಗಿ ಬಹುಬೇಡಿಕೆ ಹೊಂದಿರುವವರು. ಉಳಿದಂತೆ ಕಲಾಸಂಘಟಕ, ಚಲನಚಿತ್ರ ನಟ, ರಂಗಭೂಮಿ ಕಲಾವಿದ, ವಾಗ್ಮಿ, ಕಾರ್ಯಕ್ರಮ ನಿರೂಪಕ, ರಸಮಂಜರಿಗಳಲ್ಲಿ ಹಾಡುಗಾರ ಹೀಗೆ ಬಹುಮುಖ ಪ್ರತಿಭೆ ತೋರುತ್ತಿರುವವರು.