ಸಾಹಿತ್ಯದಿಂದ ಸಂಸ್ಕಾರ ವೃದ್ಧಿ – ಎಡನೀರುಶ್ರೀ
ಸಾಹಿತ್ಯದಿಂದ ಸಂಸ್ಕಾರ ವೃದ್ಧಿ – ಎಡನೀರುಶ್ರೀ
ಕಾಸರಗೋಡು : ‘ಚುಟುಕು ಸಾಹಿತ್ಯ ಪ್ರಕಾರವು ಲಲಿತವಾಗಿ, ಪ್ರಾಸಬದ್ಧವಾಗಿ ಆಕರ್ಷಣೀಯ. ಜಿಲ್ಲೆಯ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಎಳೆಯ ಮಕ್ಕಳಲ್ಲಿ ಕನ್ನಡ ಸಾಹಿತ್ಯ ಪ್ರಜ್ಞೆಯನ್ನು ಅರಳಿಸುವುದು ಅಗತ್ಯ ಹಾಗೂ ಅನಿವಾರ್ಯ. ಈ ನಿಟ್ಟಿನಲ್ಲಿ ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಯೋಜನೆಗಳು ಯಶಸ್ವಿಯಾಗಲಿ. ಸಂಘಟನೆಯ ಕನ್ನಡ ಪರ ಸೇವೆಗೆ ಶ್ರೀಮಠದ ಸಹಕಾರವಿದೆ’ ಎಂದು ಎಡನೀರು ಮಠದ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಹೇಳಿದರು. ಅವರು ಸೋಮವಾರ ಎಡನೀರು ಮಠದಲ್ಲಿ ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ‘ಲಾಂಛನ’ ಬಿಡುಗಡೆ ಮಾಡಿ ಆಶೀರ್ವಚನ ನೀಡಿ ಮಾತನಾಡಿದರು. ‘ಸಾಹಿತ್ಯದಿಂದ ಸಂಸ್ಕಾರ ವೃದ್ಧಿಯಾಗುತ್ತದೆ. ಸಾಹಿತ್ಯದ ಸಂಪರ್ಕದಿಂದ ಬೆಳೆಯುವ ಮಕ್ಕಳ ಮನೋವಿಕಾರಗಳು ನಾಶವಾಗುತ್ತದೆ. ಬೆಳೆಯುವ ಮಕ್ಕಳಲ್ಲಿ ಸಾಹಿತ್ಯ ಅಧ್ಯಯನ ಹಾಗೂ ರಚನಾ ಕೌಶಲವನ್ನು ಪ್ರೇರೇಪಿಸಬೇಕು’ ಎಂದು ಹೇಳಿದರು. ಈ ಸಂದರ್ಭದಲ್ಲಿ ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಸ್ಥಾಪಕ ಸಂಚಾಲಕರಾದ ಡಾ. ವಾಮನ್ ರಾವ್ ಬೇಕಲ್, ಶಿಕ್ಷಣ ತಜ್ಞ ವಿ ಬಿ ಕುಳಮರ್ವ, ನಿವೃತ್ತ ಜಿಲ್ಲಾ ವಿದ್ಯಾಧಿಕಾರಿ ಲಲಿತಾಲಕ್ಷ್ಮಿ ಕುಳಮರ್ವ, ನಿವೃತ್ತ ಶಿಕ್ಷಕರಾದ ಶ್ರೀಹರಿ ಭಟ್ ಪೆಲ್ತಾಜೆ, ಸಂಧ್ಯಾರಾಣಿ ಟೀಚರ್, ಸಾಹಿತಿ ವೆಂಕಟ್ ಭಟ್ ಎಡನೀರು, ಹಿರಿಯ ಪತ್ರಕರ್ತ, ಸಾಹಿತಿ ರಾಧಾಕೃಷ್ಣ ಕೆ ಉಳಿಯತ್ತಡ್ಕ, ಪತ್ರಕರ್ತರಾದ ಪುರುಷೋತ್ತಮ ಪೆರ್ಲ, ಜಗನ್ನಾಥ, ಕನ್ನಡ ಭವನದ ಕಾರ್ಯದರ್ಶಿ ವಸಂತ ಕೆರೆಮನೆ ಮೊದಲಾದವರು ಇದ್ದರು. ಸಾಹಿತಿ ವಿರಾಜ್ ಅಡೂರು ಸಂಘಟನೆಯ ಕಾರ್ಯಯೋಜನೆಗಳ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ 2025 ಫೆ.2ರಂದು ಅಪರಾಹ್ನ 2ರಿಂದ ನಡೆಯುವ ಸಂಘಟನೆಯ ಪದಗ್ರಹಣ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಎಡನೀರು ಶ್ರೀಗಳು ಬಿಡುಗಡೆ ಮಾಡಿದರು. ನಿವೃತ್ತ ಪ್ರಾಂಶುಪಾಲ ಪ್ರೋ. ಎ ಶ್ರೀನಾಥ್ ವಂದಿಸಿದರು.