ಆತ್ಮಹತ್ಯೆಗೆ ಯತ್ನಿಸಿ ಕಾಲು ಮುರಿದುಕೊಂಡ ಅಪರಿಚಿತ ಯುವಕ: ಸಮಾಜಸೇವಕ ವಿಶು ಶೆಟ್ಟಿ ಅವರಿಂದ ರಕ್ಷಣೆ
ಆತ್ಮಹತ್ಯೆಗೆ ಯತ್ನಿಸಿ ಕಾಲು ಮುರಿದುಕೊಂಡ ಅಪರಿಚಿತ ಯುವಕ: ಸಮಾಜಸೇವಕ ವಿಶು ಶೆಟ್ಟಿ ಅವರಿಂದ ರಕ್ಷಣೆ
ಉಡುಪಿ : ಮಣಿಪಾಲ ಠಾಣಾ ವ್ಯಾಪ್ತಿಯಲ್ಲಿ ಯುವಕನೊಬ್ಬ ಆತ್ಮಹತ್ಯೆಗೆ ಪ್ರಯತ್ನಿಸಿ ಕಾಲು ಮುರಿದುಕೊಂಡ ಘಟನೆ ಬುಧವಾರ ನಡೆದಿದೆ. ಮಾಹಿತಿ ಪಡೆದ ಸಮಾಜ ಸೇವಕ ವಿಶು ಶೆಟ್ಟಿ ಅವರು ಸಾರ್ವಜನಿಕರ ಸಹಕಾರದಿಂದ ಆತನನ್ನು ರಕ್ಷಿಸಿ, ತನ್ನ ವಾಹದನಲ್ಲಿಯೇ ಕರೆದೊಯ್ದು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.
ಯುವಕ ಮನೋ ರೋಗಿಯಾಗಿದ್ದು, ದೈಹಿಕವಾಗಿ ಹಾಗೂ ಮಾನಸಿಕವಾಗಿ ತೀವ್ರವಾಗಿ ಬಳಲಿರುವುದರಿಂದ ಯಾವುದೇ ವೈಯಕ್ತಿಕ ಮಾಹಿತಿಯನ್ನು ನೀಡುತ್ತಿಲ್ಲ. ಯುವಕ ಅಸ್ಸಾಂ ಮೂಲದವ ಎಂಬ ಮಾಹಿತಿ ಲಭಿಸಿದೆ. ಈತ ಹಿಂದೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಲು ಪ್ರಯತ್ನಿಸಿದ್ದ ಸಂದರ್ಭದಲ್ಲಿ ಸಾರ್ವಜನಿಕರು ರಕ್ಷಿಸಿದ್ದಾರೆ. ನಂತರ ನೇಣು ಬಿಗಿದು ಆತ್ಮಹತ್ಯೆ ನಡೆಸಲು ಪ್ರಯತ್ನಿಸಿರುವುದು ಕೂಡಾ ಬಯಲಾಗಿದೆ. ಇದೆಲ್ಲಾ ವಿಫಲವಾದ ಬಳಿಕ ಮರ ಏರಿ ಅಲ್ಲಿಂದ ಜಿಗಿದು ಆತ್ಮಹತ್ಯೆಗೆ ಪ್ರಯತ್ನಿಸಿದ್ದಾನೆ. ಈ ಸಂದರ್ಭದಲ್ಲಿ ಆತನ ಬಲಗಾಲಿನ ಎಲುಬು ಮುರಿತಕ್ಕೆ ಒಳಗಾಗಿದೆ.ಪ್ರಕರಣದ ಕುರಿತು ಮಣಿಪಾಲ ಠಾಣೆಗೆ ಮಾಹಿತಿ ನೀಡಲಾಗಿದೆ ಎಂದು ವಿಶು ಶೆಟ್ಟಿ ತಿಳಿಸಿದ್ದಾರೆ.
ಯುವಕನ ವಾರೀಸುದಾರರು ಇದ್ದಲ್ಲಿ ಜಿಲ್ಲಾಸ್ಪತ್ರೆಯನ್ನು ಸಂಪರ್ಕಿಸುವಂತೆ ವಿಶು ಶೆಟ್ಟಿ ವಿನಂತಿಸಿದ್ದಾರೆ.