ಕಡಬ : ಸತತ ಮೂರು ಬಾರಿ ದೈವಸ್ಥಾನದ ಕಾಣಿಕೆ ಹುಂಡಿ ಒಡೆದ ಕಳ್ಳನ ಪತ್ತೆ ; ದೈವದ ಕಾರ್ಣಿಕವೇ ಕಳ್ಳನ ಪತ್ತೆಗೆ ಕಾರಣ ಎನ್ನುತ್ತಿರುವ ಸ್ಥಳೀಯರು

ಕಡಬ : ಸತತ ಮೂರು ಬಾರಿ ದೈವಸ್ಥಾನದ ಕಾಣಿಕೆ ಹುಂಡಿ ಒಡೆದ ಕಳ್ಳನ ಪತ್ತೆ ; ದೈವದ ಕಾರ್ಣಿಕವೇ ಕಳ್ಳನ ಪತ್ತೆಗೆ ಕಾರಣ ಎನ್ನುತ್ತಿರುವ ಸ್ಥಳೀಯರು
ಕಡಬ: ಸತತ ಮೂರು ಬಾರಿ ದೈವಸ್ಥಾನದ ಕಾಣಿಕೆ ಹುಂಡಿ ಒಡೆದಾತ ಇದೀಗ ಸಿಕ್ಕಿಬಿದ್ದಿದ್ದು, ದೈವಸ್ಥಾನದ ಆಡಳಿತ ಸಮಿತಿಯವರು ದೈವದ ಮೇಲೆಯೇ ನಂಬಿಕೆ ಇರಿಸಿ ಸತ್ಯವಿದ್ದರೆ ದೈವವೇ ಕಳ್ಳನ ಸುಳಿವು ನೀಡಲಿ ಎಂದು ನಂಬಿಕೆ ಇಟ್ಟು ಹರಕೆಯನ್ನೂ ಹೊತ್ತಿದ್ದರು. ನೇಮೋತ್ಸವಕ್ಕೆ ಎರಡು ದಿನ ಇರುವ ಮೊದಲೇ ಕಳ್ಳತನ ಮಾಡಿದಾತ ಸಿಕ್ಕಿಬಿದ್ದಿದ್ದಾನೆ.
ಶಿವರಾತ್ರಿಯ ಸಂಜೆ ಕಡಬ-ಪಂಜ ರಸ್ತೆಯ ಓಂತ್ರಡ್ಕ ಶಾಲಾ ಆವರಣದಲ್ಲಿ ಅನುಮಾನಾಸ್ಪದ ವ್ಯಕ್ತಿಯೋರ್ವ ಹೋಗಿರುವುದನ್ನು ಗಮನಿಸಿ ಹಿಂಬಾಲಿಸಿ, ಆತನನ್ನು ಪ್ರಶ್ನಿಸಿದ್ದರು. ಸರಿಯಾದ ಉತ್ತರ ನೀಡದಿರುವ ಹಿನ್ನೆಲೆ ಪೊಲೀಸರಿಗೆ ಮಾಹಿತಿ ನೀಡಿದ್ದು ಆತನನ್ನು ಠಾಣೆಗೆ ಕರೆದೊಯ್ದು ವಿಚಾರಿಸಿದ್ದಾರೆ. ಕಾಣಿಯೂರಿನ ನಾವೂರು ಎಂಬಲ್ಲಿನ ಲೋಹಿತ್ ಗೌಡ ಎಂಬುದಾಗಿ ತನ್ನ ಪರಿಚಯ ಹೇಳಿಕೊಂಡಿರುವುದಾಗಿ ತಿಳಿದು ಬಂದಿದೆ. ಅಲ್ಲದೆ ವಿಚಾರಣೆ ವೇಳೆ ಮೂರು ಬಾರಿ ಕಾಣಿಕೆ ಡಬ್ಬಿ ಹೊಡೆದು ಕಳ್ಳತನ ಮಾಡಿರುವುದಾಗಿಯೂ ಒಪ್ಪಿಕೊಂಡಿದ್ದಾನೆ.
ಈತನು ಬೆಳ್ಳಾರೆ ಪರಿಸರದಲ್ಲಿಯೂ ಹಲವಾರು ಕಡೆ ಕಳ್ಳತನ ಮಾಡಿರುವ ಆರೋಪ ಈತನ ಮೇಲಿದೆ. ಪೊಲೀಸರು ಈತನಿಗೆ ಕಳ್ಳತನ ಕೃತ್ಯದಲ್ಲಿ ಭಾಗಿಯಾಗದಂತೆ ಎಚ್ಚರಿಕೆ ನೀಡಿ ಮುಚ್ಚಳಿಕೆ ಬರೆಸಿಕೊಂಡಿದ್ದು ಜೊತೆಗೆ ಆತನ ಬೆರಳಚ್ಚು ಪಡೆದುಕೊಂಡಿರುವುದಾಗಿ ಮಾಹಿತಿ ಲಭಿಸಿದೆ. ಈ ಬೆರಳಚ್ಚು ಪಡೆದಿರುವುದರಿಂದ ಇನ್ನು ಬೇರೆ ಕಡೆ ಎಲ್ಲಿ ಕಳ್ಳತನ ಮಾಡಿದರೂ ಈತನ ಕೈವಾಡವಿದ್ದಲ್ಲಿ ಪೊಲೀಸ್ ತನಿಖೆಗೆ ನೆರವಾಗಲಿದೆ.ಅಲ್ಲದೆ ದಂಡಾಧಿಕಾರಿಯವರ ಮೂಲಕ ಈ ಪ್ರದೇಶಕ್ಕೆ ಸುಳಿಯದಂತೆ ಆತನಿಂದ ಬಾಂಡ್ ಬರೆಸಿಕೊಳ್ಳುವ ಪ್ರಕ್ರಿಯೆಯೂ ನಡೆಯಲಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.