ವರಮಹಾಲಕ್ಷ್ಮಿ ಹಬ್ಬದ ಕಾರಣ ಮತ್ತು ಮಹತ್ವ!
ವರಮಹಾಲಕ್ಷ್ಮಿ ಹಬ್ಬದ ಕಾರಣ ಮತ್ತು ಮಹತ್ವ!
ನಾಡಿನ ಸಮಸ್ತ ಜನತೆಗೆ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು
ಲಕ್ಷ್ಮೀದೇವಿಯನ್ನು ಎಂಟು ರೂಪಗಳ ಸಂಪತ್ತಿಗೆ ಹೋಲಿಕೆ ಮಾಡಲಾಗಿದ್ದು,
- ಜ್ಞಾನ,
- ಐಶ್ವರ್ಯ,
- ಸುಖ,
- ಆರೋಗ್ಯ,
- ಧನ,
- ಧಾನ್ಯ,
- ಜಯ,
- ವಿಜಯ
ಇವುಗಳನ್ನು ಲಕ್ಷ್ಮೀಯ ಲಕ್ಷಣಗಳೆಂದು ಹೇಳಲಾಗಿದ್ದು ವರಮಹಾಲಕ್ಷ್ಮಿ ವ್ರತವನ್ನಾಚರಿಸಿದರೆ ಜ್ಞಾನ, ಐಶ್ವರ್ಯ, ಸುಖ, ಆರೋಗ್ಯ, ಧನ, ಧಾನ್ಯ, ಜಯ, ವಿಜಯಗಳೆಂಬ ಅಷ್ಟ ಐಶ್ವರ್ಯ ಪ್ರಾಪ್ತಿಯಾಗುತ್ತದೆ ಎಂಬುದು ನಂಬಿಕೆ.
ಇತಿಹಾಸ
ಸ್ಕಂದ ಪುರಾಣದ ಪ್ರಕಾರ ಒಮ್ಮೆ ತಾಯಿ ಪಾರ್ವತಿ ದೇವಿ ಲೋಕದ ಚಿಂತನೆಯಲ್ಲಿ ಮುಳುಗಿ ಬಡಜನರ ಬಗ್ಗೆ ಚಿಂತಾಕ್ರಾಂತಳಾಗಿ ವಿಚಾರ ಮಾಡುತ್ತಿರುವಾಗ ಪತಿಯಾದ ಪರಮೇಶ್ವರ ಸತಿಯ ಚಿಂತೆಯನ್ನರಿತು ಹೀಗೊಂದು ಪರಿಹಾರಾರ್ಥಕವಾದ ಕಥೆ ಹೇಳುತ್ತಾನೆ.
ಚಾರುಮತಿಯೆಂಬ ಪತಿವ್ರತೆಯೋರ್ವಳು ದೇವಿಯಲ್ಲಿ ಮೊರೆಯಿಡುವ ಆರ್ತನಾದ ದೇವಿಗೆ ಕೇಳುತ್ತದೆ. ದೇವಿ ಕಿವಿಗೊಟ್ಟು ಆಲಿಸಿದಾಗ ಚಾರುಮತಿಯ ಬಡತನವೇ ಆಕೆಯ ಸಕಲ ಕಷ್ಟಕ್ಕೂ ಕಾರಣವೆಂಬುವುದು ತಿಳಿದು ಬರುತ್ತದೆ, ಆಗ ಲಕ್ಷ್ಮೀದೇವಿಯು ಸ್ವತಃ ಆಕೆಯ ಸ್ವಪ್ನದಲ್ಲಿ ಕಾಣಿಸಿಕೊಂಡು ಶ್ರಾವಣದ ಎರಡನೇ ಶುಕ್ರವಾರ ಅಂದರೆ ನವಮಿಯಂದು ಬ್ರಾಹ್ಮಿ ಮುಹೂರ್ತದಲ್ಲಿ ಕಲಶ ಸ್ಥಾಪನೆ ಮಾಡಿ, ಒಂದು, ಮೂರು, ಐದು ಅಥವಾ ಎಂಟು, ಒಂಬತ್ತು ಮುತ್ತೈದೆಯರಿಗೆ ಶಕ್ತ್ಯಾನುಸಾರ ಮಂಗಳದ್ರವ್ಯಗಳೊಂದಿಗೆ ಉಪಚರಿಸಿ ತನ್ನನ್ನು ಬೇಡಿಕೊಂಡರೆ ಸಕಲಸರ್ವೋತ್ತರ ಅಭಿವೃದ್ಧಿ ಯಾಗುವುದು ಎಂದು.
ನಿದಿರೆಯಿಂದ ಎಚ್ಚೆತ್ತ ಚಾರುಮತಿ ಮುಂಬರುಯವ ಶ್ರಾವಣಕ್ಕೆ ಕಾತರದಿಂದ ಕಾದಿದ್ದು ವರಮಹಾಲಕ್ಷ್ಮಿಯನ್ನು ಪೂಜಿಸುತ್ತಾಳೆ ಅಂದಿನಿಂದ ಚಾರುಮತಿಯ ಕಷ್ಟ ಕಳೆದು ಆಕೆಯ ಮನೆ ಮನ ಬೆಳಗಿ ವರಮಹಾಲಕ್ಷ್ಮಿ ವೃತ ಜಗತ್ಪ್ರಸಿದ್ಧವಾಯಿತು.
ಇನ್ನೊಂದು ಕಥೆ
ಅದು ಪೂರ್ವಕಾಲ. ದೇಶ ಸತ್ಯಲೋಕ. ಅಲ್ಲಿ ಋಷಿಶ್ರೇಷ್ಠರೆಲ್ಲರೂ ಸೇರಿದ್ದರು. ಪುರಾಣಿಕ ಶಿಖಾಮಣಿ ಸೂತಮಹರ್ಷಿ ಅವರ ಪ್ರವಚನ ಇತ್ತು. ಆ ಋಷಿಶ್ರೇಷ್ಠರೆಲ್ಲರೂ ಸೂತಮಹರ್ಷಿಗಳ ಬಳಿ ಪ್ರವಚನದ ವಿಚಾರ ಮಾತನಾಡುತ್ತ, ʻಪುರಾಣ ಪುರುಷೋತ್ತಮರಾದ ತಾವು ತ್ರಿಕಾಲ ಜ್ಞಾನಿಗಳು. ನೀವು ನಮಗೆ ಅನುಗ್ರಹ ಮಾಡುವುದಾದರೆ, ಲೋಕದಲ್ಲಿ ಸರ್ವ ಸೌಭಾಗ್ಯಗಳನ್ನೂ ಕೊಡುವ ಉತ್ತಮವಾದ ವ್ರತಾಚರಣೆಯನ್ನು ಹೇಳಿʼ ಎಂದು ಕೇಳಿಕೊಂಡರು.
ಋಷಿ ಶ್ರೇಷ್ಠರ ಮಾತನ್ನು ಮನ್ನಿಸಿದ ಸೂತಮಹರ್ಷಿಗಳು ತಮ್ಮ ಪ್ರವಚನದಲ್ಲಿ ಕಥೆಯೊಂದನ್ನು ಹೇಳಲು ಅಣಿಯಾದರು.
ಋಷಿ ಶ್ರೇಷ್ಠರೇ, ಈ ಲೋಕದಲ್ಲಿ ಭಕ್ತಿಯಿಂದ ಪೂಜಿಸುವವರಿಗೆ ಸಕಲ ಇಷ್ಟಾರ್ಥಗಳು ಈಡೇರುವಂತಹ ಅತ್ಯುತ್ತಮವಾದ ವ್ರತಾಚರಣೆ ಒಂದು ಇದೆ. ಆ ವ್ರತಾಚರಣೆಯ ಹಿನ್ನೆಲೆಯನ್ನು ನಿಮಗೆ ತಿಳಿಸಿಕೊಡುವೆ ಎನ್ನುತ್ತ ಕಥೆ ಹೇಳಲಾರಂಭಿಸಿದರು.
ಅದು,
ಕೈಲಾಸ ಪರ್ವತ. ದೇವನದಿಗಳು ಹರಿಯುವ ನಿತ್ಯ ಹರಿದ್ವರ್ಣದ ನಾನಾ ಬಗೆಯ ವೃಕ್ಷ ಸಮೂಹದಿಂದ ಕೂಡಿದ ಪ್ರದೇಶ. ಕಾಮಧೇನು, ಕಲ್ಪವೃಕ್ಷ ಏನಿಲ್ಲ ಅಲ್ಲಿ. ಎಲ್ಲವೂ ಇರುವ ಆವಾಸಸ್ಥಾನವದು.
ಆದ್ದರಿಂದ ಯಕ್ಷರಾಕ್ಷಸ ಗರುಡ ಗಂಧರ್ವ ದೇವಮಾನುಷಾದಿಗಳು ತಮ್ಮ ಪೂರ್ವ ಪುಣ್ಯಾನುಸಾರ ಸೇರಿ ಅಲ್ಲಿಗೆ ಹೋಗಿ ಆ ಪ್ರದೇಶದ ಒಡೆಯನಾದ ಪಾರ್ವತೀಶ್ವರನಿಗೆ ಸೇವೆ ಸಲ್ಲಿಸುತ್ತಿರುವರು. ಕೈಲಾಸ ಎಂಬುದು ಪಾರ್ವತಿ ಪರಮೇಶ್ವರರ ನಿತ್ಯಸಾನ್ನಿಧ್ಯ ಇರುವಂಥದ್ದು.
ಅಲ್ಲಿ ಹಿಂದೊಮ್ಮೆ, ಪರಮೇಶ್ವರನು ಪಾರ್ವತಿಯಾಡನೆ ಸಂತೋಷದಿಂದ ಕುಳಿತಿದ್ದ. ಆಗ ಜಗನ್ಮಾತೆಯಾದ ಪಾರ್ವತಿಯು ಪರಮೇಶ್ವರನನ್ನು ಕುರಿತು, ʻಮಹಾದೇವಾ, ಪ್ರಪಂಚದಲ್ಲಿ ಸಕಲ ಸುಖಗಳನ್ನು ಕೊಟ್ಟು ಭಕ್ತರ ಕಷ್ಟವನ್ನು ಪರಿಹರಿಸಿ ಸೌಭಾಗ್ಯ ಸಂತೋಷಗಳನ್ನು ಉಂಟುಮಾಡುವ ವ್ರತ ಯಾವುದು? ಅದನ್ನು ನನಗೆ ಹೇಳುʼ ಎಂದು ಕೇಳಿಕೊಂಡಳು.
ಆಗ ಪರಮೇಶ್ವರನು ಪಾರ್ವತಿಯೇ ಕೇಳು, ʻಸರ್ವ ಸಂಪತ್ಪ್ರದವಾದ ಪುತ್ರಪೌತ್ರದಾಯಕವಾದ ಸನ್ಮಂಗಳ ಸಂತಾನಕರವಾದ ವರಲಕ್ಷ್ಮೀವ್ರತ ಎಂಬುದು ಒಂದು ಇದೆ. ಈ ವ್ರತವನ್ನು ಭಕ್ತಿ ಸಂಪನ್ನರಾದ ಹೆಂಗಸರಾಗಲಿ, ಗಂಡಸರಾಗಲಿ, ಮಕ್ಕಳಾಗಲಿ ಮಾಡಬಹುದು. ಈ ವ್ರತವನ್ನು ಶ್ರಾವಣಮಾಸದ ಶುಕ್ಲಪಕ್ಷದಲ್ಲಿ ಹುಣ್ಣಿಮೆಗೆ ಹತ್ತಿರವಾದ ಶುಕ್ರವಾರದ ದಿನ ಮಾಡಬೇಕುʼ ಎಂದು ಹೇಳಿದನು.
ಸಂತುಷ್ಠಳಾದ ಪಾರ್ವತಿಯು, ʻಸ್ವಾಮಿ ವರಲಕ್ಷ್ಮೀ ವ್ರತದ ನಿಯಮವೇನು? ಅದನ್ನು ಹೇಗೆ ಮಾಡಬೇಕು? ಆ ವ್ರತಕ್ಕೆ ಅಧಿದೇವತೆ ಯಾರು?ʼ ಎಂದು ಕೇಳಿದಳು.
ಆಗ ಪರಮೇಶ್ವರನು, ʻಆ ವ್ರತಕ್ಕೆ ಅಧಿದೇವತೆ ಮಹಾಲಕ್ಷ್ಮಿ. ಇದನ್ನು ಶ್ರಾವಣಮಾಸದಲ್ಲಿ ಪೌರ್ಣಿಮೆ ಸಮೀಪಸ್ಥವಾದ ಭೃಗುವಾರದಲ್ಲಿ ಮಾಡಬೇಕು. ಆ ರೀತಿ ವ್ರತ ಮಾಡಿದ ಭಕ್ತರ ಕೋರಿಕೆಗಳೆಲ್ಲ ಕೈಗೂಡಿ ಕಷ್ಟ ಕಾಯಕಗಳು ನಾಶವಾಗುವುದು. ಈ ವಿಷಯದಲ್ಲಿ ಪ್ರಸಿದ್ಧವಾದ ಒಂದು ಕಥೆಯುಂಟು. ಅದನ್ನು ಹೇಳುತ್ತೇನೆ ಕೇಳುʼ ಎಂದು ಪಾರ್ವತಿಗೆ ಕಥೆಯನ್ನು ಹೇಳಲು ಮುಂದಾದ.
ವಿದರ್ಭ ದೇಶಕ್ಕೆ ರಾಜಧಾನಿ ಕುಂಡಿನನಗರ. ಅಲ್ಲಿ ಚಾರುಮತಿ ಎಂಬ ಮಹಿಳೆ ಇದ್ದಳು. ಆಕೆ ದರಿದ್ರಳಾದರೂ ಸದಾಚಾರ ಸಂಪನ್ನಳು, ಪತಿ ಶುಶ್ರೂಷೆಯೆ ಮುಖ್ಯ ಎಂದು ತಿಳಿದು ಸದಾ ಸಂತೋಷ ಚಿತ್ತಳಾಗಿ ಪತಿಯ ಮನಸ್ಸನ್ನು ನೋಯಿಸದೆ ಸದ್ವರ್ತನೆ ತೋರುತ್ತಿದ್ದವಳು.
ಇವಳ ಸದಾಚಾರ ಸಂಪನ್ನತೆಗೆ ಮೆಚ್ಚಿದ ಮಹಾಲಕ್ಷ್ಮಿಯು, ಒಂದು ದಿನ ಚಾರುಮತಿಯು ಮಲಗಿ ನಿದ್ರಿಸುತ್ತಿರುವಾಗ ಸ್ವಪ್ನದಲ್ಲಿ ಪ್ರತ್ಯಕ್ಷಳಾಗಿ ಹೇಳಿದಳು- “ಪತಿವ್ರತೆಯಾದ ಚಾರುಮತಿ, ನಿನ್ನ ಗುಣಶೀಲಗಳಿಗೆ ಮೆಚ್ಚಿ ನಿನ್ನ ಪೂರ್ವ ಪುಣ್ಯಾನುಸಾರವಾಗಿ ನಿನಗೆ ಅನುಗ್ರಹ ಮಾಡಲು ಬಂದಿರುವ ಮಹಾಲಕ್ಷ್ಮಿ ನಾನು. ಈಗ ನಾನು ಹೇಳುವ ವಿಷಯವನ್ನು ಗಮನವಿಟ್ಟು ಕೇಳಿ ಆಚರಿಸು. ಅದರಿಂದ ನಿನ್ನ ದಾರಿದ್ರ್ಯವು ನಾಶವಾಗಿ, ಅಷ್ಟೈಶ್ವರ್ಯವು ಪ್ರಾಪ್ತಿಯಾಗುತ್ತದೆ.
ಶ್ರಾವಣ ಮಾಸದಲ್ಲಿ ಬರುವ ಎರಡನೆಯ ಶುಕ್ರವಾರದ ದಿನ ಪ್ರದೋಷ ಸಮಯಕ್ಕೆ ಸರಿಯಾಗಿ ವಿಧಿವತ್ತಾಗಿ ಯಾರು ನನ್ನ ಪೂಜೆಯನ್ನು ಮಾಡುವರೋ ಅಂಥವರಿಗೆ ನಾನು ಸಕಲ ಭೋಗಭಾಗ್ಯಗಳನ್ನು ಕೊಡುವೆನು. ಯಾರಿಗೆ ಪುಣ್ಯ ಸಂಪರ್ಕವಿರುವುದೊ, ಅಂಥವರಿಗೆ ಈ ವ್ರತದಲ್ಲಿ ಭಕ್ತಿ ಹುಟ್ಟುತ್ತದೆ.ಭೂಲೋಕದಲ್ಲಿ ಯಾರು ನನ್ನನ್ನು ಭಕ್ತಿಯಿಂದ ಪೂಜಿಸುತ್ತಾರೋ ಅವರೇ ಧನ್ಯರು! ಅವರೇ ಶೂರರು! ಅವರೇ ಪುಣ್ಯಶಾಲಿಗಳು, ಅವರೇ ಮಹಾತ್ಮರು, ಸಾಹಸಿಗಳು. ಅವರೇ ಪಂಡಿತರು, ಅಂಥವರೇ ಸ್ತೋತ್ರಾರ್ಹರು, ಬಹಳವಾಗಿ ಹೇಳುವುದೇನು? ಅವರೇ ಸರ್ವೋತ್ತಮರು. ಯಾರು ನನ್ನ ಕಟಾಕ್ಷಕ್ಕೆ ಬಾಹಿರರಾಗಿರುವರೊ! ಅವರ ಬಾಳು ಅಜಗಳಸ್ತನದಂತೆ ವ್ಯರ್ಥವೇ ಸರಿ. ಆದ ಕಾರಣ ನೀನು ಈ ವ್ರತವನ್ನು ಮಾಡಿ ಧನ್ಯಳಾಗು” ಎಂದು ಉಪದೇಶಿಸಿ ಅಂತರ್ದಾನಳಾದಳು.
ಈ ಘಟನೆ ಬಳಿಕ ನಿದ್ದೆಯಿಂದ ಎದ್ದ ಚಾರುಮತಿಯು ನಡೆದ ಘಟನೆಯನ್ನು ತನ್ನವರಿಗೆ ಹೇಳಿದಳು. ಕೆಲ ದಿನಗಳ ಬಳಿಕ ಶ್ರಾವಣಮಾಸದ ಎರಡನೆಯ ಶುಕ್ರವಾರ ಬಂದಿತು. ಆ ದಿನ ಬಹು ಜನ ಭಕ್ತರು ವರಮಹಾಲಕ್ಷ್ಮಿಯನ್ನು ಪೂಜಿಸಿ ಸಂತೋಷದಿಂದ ಕೋರಿಕೆಗಳನ್ನು ಕೈಗೂಡಿಸಿಕೊಂಡು ಸುಖದಿಂದ ಬಾಳುತ್ತಿದ್ದರು.
ಆದರೆ, ದರಿದ್ರಳಾದ ಚಾರುಮತಿಯು ನಿಯಮದಿಂದ ಈ ವ್ರತವನ್ನು ಮಾಡಿ ವರಲಕ್ಷ್ಮಿಯ ಕಟಾಕ್ಷದಿಂದ ಅಷ್ಟೈಶ್ವರ್ಯವನ್ನೂ ಪಡೆದಳು.
ಸುಖವನ್ನು ಅನುಭವಿಸುತ್ತ ಬಡವರಿಗೆ ಅನ್ನದಾನ ಮಾಡಿ, ಬಂಧುವರ್ಗದವರನ್ನು ಪ್ರೀತಿಯಿಂದ ಕಾಪಾಡುತ್ತ ಭೂಲೋಕದಲ್ಲಿ ಅನಂತವಾದ ಅಪಾರಸೌಖ್ಯ ಅನುಭವಿಸಿ, ಪರಲೋಕದಲ್ಲಿ ಶ್ರೇಷ್ಠವಾದ ಪತಿಸಾಯುಜ್ಯವನ್ನು ಪಡೆದಳು.ಆದ ಕಾರಣ ಈ ಲೋಕದಲ್ಲಿ ಯಾರು ಭಕ್ತಿಭಾವದಿಂದ ಈ ವ್ರತವನ್ನು ಆಚರಿಸುವರೋ ಅಂಥವರು ಅಖಂಡವಾದ ಐಶ್ವರ್ಯ ಪಡೆದು, ವರಲಕ್ಷ್ಮಿಯ ಪ್ರಸಾದದಿಂದ ಭೋಗಭಾಗ್ಯಗಳನ್ನು ಅನುಭವಿಸುವರುʼ ಎಂದು ಹೇಳಿ ಪರಮೇಶ್ವರನು ಕಥೆ ಮುಗಿಸಿದನು.ಕಥೆ ಕೇಳಿದ ಪಾರ್ವತಿಯು, “ಮಹಾದೇವ ನನ್ನಲ್ಲಿ ನಿನಗೆ ದಯೆಯುಂಟಾದರೆ ಈ ವಿಧಾನವನ್ನು ವಿವರವಾಗಿ ಹೇಳಬೇಕು” ಎಂದು ಕೇಳಿಕೊಂಡಳು.
ಆಗ ಪರಮೇಶ್ವರನು ಪೂಜಾ ವಿಧಾನಗಳನ್ನು ಹೀಗೆ ವಿವರಿಸಿದನು-
ಶ್ರಾವಣಮಾಸದ ಎರಡನೆಯ ಶುಕ್ರವಾರದ ದಿನ ಭಕ್ತಿಯುಳ್ಳ ಸ್ತ್ರೀಯರಾಗಲಿ, ಪುರುಷರಾಗಲಿ ಅಭ್ಯಂಜನವನ್ನು ಮಾಡಿಕೊಂಡು ಮಂಗಳ ಸ್ನಾನದ ನಂತರ ಶುಭವಸ್ತ್ರಗಳನ್ನು ಧರಿಸಬೇಕು. ಮನೆಯಲ್ಲಿ ರಂಗೋಲಿಯಿಂದ ಅಲಂಕೃತವಾದ ಶುದ್ಧ ಪ್ರದೇಶದಲ್ಲಿ ಮನೋಹರವಾದ ಮಂಟಪವನ್ನು ನಿರ್ಮಿಸಬೇಕು.
ಅದರ ಮಧ್ಯದಲ್ಲಿ ಪಂಚವರ್ಣದಿಂದ ಕೂಡಿದ ಅಷ್ಟದಳ ಪದ್ಮವನ್ನು ರಚಿಸಿ, ಅದರ ಮೇಲೆ ಮಾವಿನ ಚಿಗುರುಗಳಿಂದ ಕೂಡಿದ ಕಲಶವನ್ನು ಇಟ್ಟು ಪ್ರಾಣಪ್ರತಿಷ್ಠಾಪನ ಮಾಡಿ, ವರಮಹಾಲಕ್ಷ್ಮಿಯನ್ನು ಪೂಜಿಸಬೇಕು. ಷೋಡಶೋಪಚಾರ ಮಾಡಿ ಸತ್ಕರಿಸಿಪದ್ಮಾಸನೆ, ಪದ್ಮಊರು, ಪದ್ಮಾಕ್ಷಿ, ಪದ್ಮ ಸಂಭವೆ ಎಂಬ ಮಂತ್ರದೊಂದಿಗೆ ಶಾಸ್ತ್ರೋಸ್ತ್ರ ಪೂಜೆಯಿಂದ ದೇವಿಯನ್ನು ತೃಪ್ತಿಪಡಿಸಿ, ಯೋಗ್ಯನಾದ ಬ್ರಾಹ್ಮಣನಿಗೆ ಉಪಾಯನ ದಾನವನ್ನು ಕೊಡಬೇಕು. ಸುವಾಸಿನಿಯರನ್ನು ಸಮಾರಾಧನೆ ಸುಗಂಧ ತಾಂಬೂಲಗಳಿಂದ ತೃಪ್ತಿಪಡಿಸಬೇಕು.
ಅನಂತರ ಭಕ್ತಿಯುಕ್ತರಾದ ಬ್ರಾಹ್ಮಣ ಸುವಾಸಿನಿಯರಿಗೆ ಭೋಜನ ಮಾಡಿಸಿ, ಭೂರಿದಕ್ಷಿಣೆಗಳನ್ನು ಕೊಟ್ಟು ಈ ಕಥೆಯನ್ನು ಕೇಳಬೇಕು” ಎಂದು ಪರಮೇಶ್ವರನು ವಿವರಿಸಿದನು.
ದಕ್ಷಿಣ ಭಾರತದಲ್ಲಿ ಪ್ರಸಿದ್ಧ ಹಬ್ಬವಿದು
ಭಾರತದಾದ್ಯಂತ ಲಕ್ಷ್ಮಿ ದೇವಿಯನ್ನು ಪೂಜಿಸಿದರೂ, ವರಮಹಾಲಕ್ಷ್ಮಿ ವ್ರತವೂ ದಕ್ಷಿಣ ಭಾರತದಲ್ಲಿ ಹೆಚ್ಚು ಪ್ರಸಿದ್ಧಿ ಪಡೆದಿದೆ. ಅದರಲ್ಲೂ ಕರ್ನಾಟಕ, ಆಂಧ್ರ ಪ್ರದೇಶ ಹಾಗೂ ತಮಿಳುನಾಡಿನಲ್ಲಿ ಇದು ಬಹಳ ಪ್ರಸಿದ್ಧಿ ಪಡೆದಿರುವ ಆಚರಣೆ. ಈ ದಿನ ತಮ್ಮ ಮನೆಗಳಲ್ಲಿ ಲಕ್ಷ್ಮಿ ದೇವಿಯನ್ನು ಪ್ರತಿಷ್ಠಾಪಿಸಿ, ಆಕೆಗೆ ಅದ್ಧೂರಿಯಾಗಿ ಹೂವು, ವಸ್ತ್ರಗಳಿಂದ ಅಲಂಕರಿಸಿ, ದೀಪ ಹಚ್ಚಿ, ಆರತಿ ಬೆಳಗಿ, ಮುತ್ತೈದೆಯರಿಗೆ ಅರಿಶಿಣ-ಕುಂಕುಮ ನೀಡುವ ಮೂಲಕ ಆಯಸ್ಸು, ಆರೋಗ್ಯ, ಐಶ್ವರ್ಯ ಹಾಗೂ ಮುತ್ತೈದೆ ಭಾಗ್ಯಕ್ಕಾಗಿ ಮಹಿಳೆಯರು ಪ್ರಾರ್ಥಿಸುತ್ತಾರೆ. ಪ್ರಮುಖವಾಗಿ ಹೆಣ್ಣು ಮಕ್ಕಳೇ ಹೆಚ್ಚು ಸಕ್ರಿಯರಾಗಿ ಆಚರಿಸುವ, ಹೆಣ್ಣು ಮಕ್ಕಳಿಗೇ ಎಂದು ಇರುವ ಹಬ್ಬವಿದು.
ಈ ವರಮಹಾಲಕ್ಷ್ಮೀ ವ್ರತವನ್ನು ಯಾರು ಮಾಡುವರೋ ಹಾಗೂ ಈ ಕಥೆಯನ್ನು ಯಾರು ಕೇಳುವರೋ ಅವರಿಗೆ ದಾರಿದ್ರ್ಯ ದುಃಖ ನಾಶವಾಗಿ ಸಂಪತಿನಿಂದ ಸಕಲ ಭಾಗ್ಯಗಳೂ ಕೂಡಿ ಬರುತ್ತವೆ ಎಂದು ಪುರಾಣ ಹೇಳುತ್ತದೆ.
ನೆನಪಿರಲಿ👇🔴