• 27 ಜುಲೈ 2024

ನಾವು ಮತ ದಾನ ಯಾಕೆ ಮಾಡಬೇಕು – ಗೋಲ್ಡ್ ಫ್ಯಾಕ್ಟರಿ ಅಭಿಯಾನ

 ನಾವು ಮತ ದಾನ ಯಾಕೆ ಮಾಡಬೇಕು – ಗೋಲ್ಡ್ ಫ್ಯಾಕ್ಟರಿ ಅಭಿಯಾನ
Digiqole Ad

ನಮ್ಮ ಮತ ಯಾರಿಗೆ?

ಮೇ 10ರ ಮತದಾನದಲ್ಲಿ ಪಾಲ್ಗೊಳ್ಳುವಂತೆ ಪ್ರೇರೇಪಿಸುವ ಗೋಲ್ಡ್ ಫ್ಯಾಕ್ಟರಿ ನ್ಯೂಸ್ ನ ವಿಶೇಷ ಅಭಿಯಾನ. ಇದರಲ್ಲಿ ಎಲ್ಲಾ ಮತದಾರರು ಮತದಾನದ ಮಹತ್ವದ ಕುರಿತು ಬರೆಯುತ್ತಿದ್ದಾರೆ.

ಬನ್ನಿ ಪ್ರಜಾತಂತ್ರವನ್ನು ಬೆಂಬಲಿಸೋಣ, ಮತದಾನ ಮಾಡೋಣ.


ಊರಿಗೆ ಉಪಕಾರಿ ಆಗೊ ನಾಯಕರನ್ನು ಆಯ್ಕೆ ಮಾಡಿ…

ಮತದಾನ ಎಲ್ಲರ ಹಕ್ಕು… ಊರಿನ ಸಮಸ್ಯೆಯನ್ನು ಎಲ್ಲರೂ ಹೋಗಿ ಹೇಳುವ ಬದಲು ಅದಕ್ಕೊಂದು ನಾಯಕನನ್ನು ಗುರುತಿಸಿ ಆಯ್ಕೆ ಮಾಡಿ ನಮ್ಮ ಕುಂದು ಕೊರತೆಗಳ ಬಗ್ಗೆ ಆ ನಾಯಕನೇ ಹೇಳಿ ಪರಿಹಾರ ಕೊಡುತ್ತಾನೆ ಎಂಬ ಭರವಸೆಗೆ ಮತದಾನ…

ಮತ ಹಾಕುವ ಹಕ್ಕು ಹೇಗೆ ಮುಖ್ಯವೊ … ಹಾಗೆ ಚುಣಾವಣೆಗೆ ನಿಂತ್ತ ಅಭ್ಯರ್ಥಿಗಳಿಗೂ ತಮ್ಮ ಊರನ್ನು ಅಭಿವೃದ್ಧಿಪಡಿಸುವುದು ಅವರ ಹಕ್ಕು… ಮತದಾರನಿಗೆ.. ಅಭ್ಯರ್ಥಿಯನ್ನು ಪ್ರಶ್ನಿಸುವ ಹಕ್ಕು ಇದೆ…. ಆದರಿಂದ ಒಳ್ಳೆಯ ಊರಿಗೆ ಉಪಕಾರಿ ಆಗೊ ನಾಯಕರನ್ನು ಆಯ್ಕೆ ಮಾಡಿ… ಊರಿಗೆ ಮಾರಿ ಆಗೊರನ್ನು ದೂರ ಮಾಡಿ….ನಮ್ಮ. ಹಿತಕ್ಕಾಗಿ ಮತದಾನ ಮಾಡಿ…

-ಯಂ.ರಾಮ ಈಶ್ವರಮಂಗಲ

(ನಾಟಕ ಬರಹಗಾರ ಮತ್ತು ನಿರ್ದೇಶಕ)

—————-

ಎಲ್ಲ ನಾಗರಿಕರ ಹಿತಕ್ಕಾಗಿ ಮತ ಚಲಾಯಿಸೋಣ

ಮತದಾನ ನಮ್ಮ ಅಮೂಲ್ಯ ಹಕ್ಕು

ಮತದಾನ ವಿಶೇಷವಾದ ಹಾಗೂ ಅತ್ಯಮೂಲ್ಯವಾದ ಹಕ್ಕು. ಪ್ರತಿಯೊಬ್ಬ ನಾಗರಿಕನು ತನಗೆ ಸಿಕ್ಕಿರುವಂತಹ ಅಮೂಲ್ಯವಾದ ಹಕ್ಕನ್ನು ಸೂಕ್ತ ರೀತಿಯಲ್ಲಿ ಚಲಾಯಿಸುವುದು ಆಧ್ಯ ಕರ್ತವ್ಯವಾಗಿದೆ. ಮತದಾನ ಮಾಡುವುದು ಪ್ರತಿಯೊಬ್ಬ ನಾಗರಿಕರ ಕರ್ತವ್ಯ ಹಾಗೂ ಜವಾಬ್ದಾರಿ ಇದು ನಮ್ಮ ರಾಷ್ಟ್ರದ ಮೂಲಭೂತ ಹಕ್ಕುಗಳಲ್ಲಿ ಒಂದಾಗಿದೆ ದೇಶದ ಭವಿಷ್ಯವನ್ನು ರೂಪಿಸಲು ಸದೃಢ ರಾಷ್ಟ್ರವನ್ನು ಕಟ್ಟಲು ಸೂಕ್ತ ನಾಯಕನನ್ನು ಚುನಾಯಿಸುವುದು ಜವಾಬ್ದಾರಿಯುತ ಪ್ರಜೆಯ ಪ್ರಮುಖ ಕರ್ತವ್ಯವಾಗಿದೆ. ಯಾವುದೇ ಆಮಿಷಗಳಿಗೆ ಒಳಗಾಗದೆ, ಪೊಳ್ಳು ಭರವಸೆಗಳನ್ನು ನಂಬದೇ, ಮತವನ್ನು ಮಾರಿಕೊಳ್ಳದೆ,ಆತ್ಮಸಾಕ್ಷಿಗೆ ಅನುಗುಣವಾಗಿ ಮತದಾನ ಮಾಡಬೇಕಾಗಿದೆ.

ಭಾರತದ ಪ್ರಜಾಪ್ರಭುತ್ವದ ವ್ಯವಸ್ಥೆಯು ಯಾವುದೇ ಭೇದವಿಲ್ಲದೆ ಎಲ್ಲರಿಗೆ ಮತದಾನ ಮಾಡುವ ಅವಕಾಶವನ್ನು ಒದಗಿಸಿ ಕೊಟ್ಟಿದೆ. ಮತದಾನಕ್ಕೆ ಶ್ರೀಮಂತ ಬಡವ ಎಂಬ ಭೇದವಿಲ್ಲ ಎಲ್ಲರೂ ಸಮಾನರೆ. ಹೀಗಿರುವಾಗ ಸರಿಯಾದ ಅಭ್ಯರ್ಥಿಗೆ ಮತದಾನ ಮಾಡುವ ಮೂಲಕ ಸೂಕ್ತ ನಾಯಕನನ್ನು ಆರಿಸೋಣ. ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಸೂಕ್ತ ನ್ಯಾಯವನ್ನು ಒದಗಿಸಿ ಕೊಡೋಣ.. ಎಲ್ಲಾ ನಾಗರಿಕರ ಹಿತಕ್ಕಾಗಿ ಮತ ಚಲಾಯಿಸೋಣ.

ಪರಿಮಳ ಐವರ್ನಾಡು ಸುಳ್ಯ


ಮುಕ್ಕಾಗದಿರಲಿ ಮತದಾನ

ಮತದಾನ ಎಂಬುದು ಪ್ರತಿಯೊಬ್ಬರ ಪ್ರಜೆಯ ಆದ್ಯ ಕರ್ತವ್ಯವಾಗಿದೆ ಮತ್ತು ಅದು ನಮ್ಮ ಅತಿ ದೊಡ್ಡ ಜವಾಬ್ದಾರಿಯೂ ಹೌದು .

ನಮ್ಮ ಮತ ಮನೆಮಗಳಿದ್ದಂತೆ ಹೇಗೆ ನಾವು ಬಹಳ ಪ್ರೀತಿಯಿಂದ ಸಾಕಿ ಸಲಹಿದ ಮುದ್ದು ಮಗಳನ್ನು ಒಬ್ಬ ಯೋಗ್ಯ ವರನನ್ನು ಹುಡುಕಿ ಅವನ ಬಗ್ಗೆ ಪೂರ್ವಪರ ಎಲ್ಲವನ್ನು ಸರಿಯಾಗಿ ಅಳೆದು ತೂಗಿ ಯೋಗ್ಯನೆನಿಸಿದ ಮೇಲೆ ನಮ್ಮ ಮಗಳನ್ನು ಮದುವೆ ಮಾಡಿಕೊಡುತ್ತೇವೆಯೋ ಹಾಗೆಯೇ ನಮ್ಮ ಮತವೂ ಕೂಡ ಅತ್ಯಮೂಲ್ಯ.

ನಮ್ಮ ಮನೆ ಮಗಳ ಬಗ್ಗೆಯೇ ಇಷ್ಟೊಂದು ಕಾಳಜಿಯನ್ನು ತೋರಿಸುವ ನಾವು ಪ್ರತಿಯೊಬ್ಬ ಭಾರತೀಯನನ್ನು ಸಲಹುತ್ತಿರುವ ನಮ್ಮ ಹೆಮ್ಮೆಯ ಭಾರತಮಾತೆಯನ್ನು ಒಬ್ಬ ಅಯೋಗ್ಯ ನಾಯಕನ ಕೈಗೊಪ್ಪಿಸದೆ ಒಬ್ಬ ಯೋಗ್ಯ ನಾಯಕನಿಗೆ ನಮ್ಮ ಅಮೂಲ್ಯ ಮತವನ್ನು ನೀಡಿ ನಮ್ಮ ಕರ್ತವ್ಯ ಮತ್ತು ಜವಾಬ್ದಾರಿ ಯನ್ನು ನಿರ್ವಹಿಸುವುದರ ಮೂಲಕ ತಾಯಿ ಭಾರತಿಯ ಋಣವನ್ನು ತೀರಿಸಬೇಕಿದೆ.

ದಯವಿಟ್ಟು ನಿಮ್ಮ ಮತಚಲಾಯಿಸುವ ಮುನ್ನ ನೂರು ಬಾರಿ ಯೋಚಿಸಿ ಉತ್ತಮ ನಾಯಕನನ್ನು ಆಯ್ಕೆ ಮಾಡಿ.

ದಯವಿಟ್ಟು ಮೇ 10 ರಂದು ತಪ್ಪದೆ ಮತದಾನ ಮಾಡಿ 🙏

ನಿಮ್ಮ ಮತವನ್ನೇ ಆಗಲಿ ಅಥವಾ ನಿಮ್ಮ ಮಗಳನ್ನೇ ಆಗಲಿ ಅಯೋಗ್ಯರಿಗೆ ಕೊಡಬೇಡಿ 🙏🙏🙏

ಜೈ ಹಿಂದ್ 🇮🇳🇮🇳🙏🙏

 

ಶಿಲ್ಪ ಜಗದೀಶ್

ಶಿಕ್ಷಕರು. ಸಾಹಿತಿಗಳು ಮತ್ತು ಹವ್ಯಾಸಿ ಬರಹಗಾರರು

ಹಿರಿಯೂರು. ಚಿತ್ರದುರ್ಗ ಜಿಲ್ಲೆ


ಬ್ರಷ್ಟಾಚಾರಿಗಳ ಸದ್ದಡಗಿ ಒಳ್ಳೆಯ ದಿನಗಳು ಬಂದೇ ಬರುತ್ತದೆ

ಸರ್ವೇಸಾಮಾನ್ಯವಾಗಿ ಎಲ್ಲ ಜನರ ಆಶಯ ಏನಂದ್ರೆ, ದೈನಂದಿನ ಬದುಕಿಗೆ ಬೇಕಾಗುವ ಸಾಮಾಗ್ರಿಗಳು ಎಲ್ಲರಿಗೂ ಕೈಗೆಟುಕುವ ದರದಲ್ಲಿ ಸಿಗಬೇಕು ಅನ್ನೋದು ಆಗಿರುತ್ತದೆ.ಹಾಗೆ ದುಡಿಯುವ ಕೈಗಳಿಗೆ ಕೆಲಸ ಕೂಡ ಸಿಗಬೇಕು.ಮತ್ತೆ ದೇಶದ ಸಂಪನ್ಮೂಲಗಳು ಸಮಾನ ರೀತಿಯಲ್ಲಿ ಹಂಚಿಕೆ ಆಗಬೇಕು ಅನ್ನುವುದು ಸಹ ಬಹಳ ಮುಖ್ಯ.ಇವತ್ತು ನಮ್ಮ ಯಾವುದೇ ಸರ್ಕಾರಿ ಕಚೇರಿಗಳಿಗೆ, ಸಾಮಾನ್ಯ ಮನುಷ್ಯನೊಬ್ಬ ಹೋಗಿ,ಲಂಚ ಕೊಡದೆ ಕೆಲಸ ಮಾಡಿಸಿಕೊಂಡು ಬರಲು ಸಾಧ್ಯವಿಲ್ಲದಂತಾಗಿದೆ. ಸಾವಿಲ್ಲದ ಮನೆಯ ಸಾಸಿವೆ ಕಾಳಾದರೂ ಸಿಗಬಹುದು, ಆದರೆ ಲಂಚಕೋರರಿಲ್ಲದ ಸರಕಾರಿ ಕಚೇರಿಗಳಿಲ್ಲ.ಇದೆಲ್ಲವನ್ನು ಸರಿಪಡಿಸುವ ಒಬ್ಬ ಪ್ರಾಮಾಣಿಕ ಮನುಷ್ಯನನ್ನು ಆರಿಸಿ ಕಳಿಸಬೇಕು ಹೌದು..ಚುನಾವಣೆಗೆ ನಿಲ್ಲುವವರೆಲ್ಲಾ ಭೃಷ್ಟರೇ ಆದರೆ ಎಂಥ ಮಾಡೋದು ಹೇಳಿ.

ಇಷ್ಟೆಲ್ಲದರ ನಡುವೆ ಸಹ ನಾವು ಆಶಾವಾದಿಗಳಾಗಿರ ಬೇಕು.ಭೃಷ್ಟಾಚಾರಿಗಳ ಸದ್ದಡಗಿ ಒಳ್ಳೆಯ ದಿನಗಳು ಬಂದೇ ಬರುತ್ತದೆ..ಆ ಕಾರಣಕ್ಕಾಗಿ ಸಂವಿಧಾನ ಹಾಗೂ ಪ್ರಜಾಪ್ರಭುತ್ವದ ಸಫಲತೆಗಾಗಿ ಪ್ರತಿಯೊಬ್ಬರೂ ಮತದಾನ ಮಾಡಬೇಕು ಅನ್ನೋದು ನನ್ನ ಅಭಿಪ್ರಾಯ.

ಕೆ ಸಿ ಕುಮಾರ್.


ನಾಡಿನ ಹಿತ ರಕ್ಷಣೆ ನಮ್ಮ ಹೊಣೆ

ಮತದಾನ ಮಾಡುವುದು ಭಾರತೀಯ ಪ್ರಜೆಗಳ ಕರ್ತವ್ಯ ಮತ್ತು ಹಕ್ಕು. ಸಮಾಜದ ಕೆಲ ಜನರಿಗೆ ಮತದಾನ ಮಾಡುವುದು ಅಂದರೆ ಭಿಕ್ಷೆಯೋ ಅಥವಾ ತನ್ನ ಅಸ್ತಿಯನ್ನು ಅಭ್ಯರ್ಥಿ ಗೆ ಕೊಟ್ಟ ಹಾಗೆ ಆಡುತ್ತಾರೆ ಇದು ತಪ್ಪು ಮತ್ತು ಮತದಾನ ನಮ್ಮ ಹಕ್ಕು ಎಂಬುದು ತಿಳಿಯಬೇಕು.

ಮತದಾನ ಮಾಡುವಾಗ ಯೋಗ್ಯವಾದ ಪಕ್ಷ, ವ್ಯಕ್ತಿಯನ್ನು ಗುರುತಿಸಿ ಮತಹಾಕಬೇಕು. ಮತವನ್ನು ದೇಶಹಿತವನ್ನು,

ನಾಡಿನ ರಕ್ಷಣೆಯನ್ನು, ಸರ್ವ ರೀತಿಯಲ್ಲಿ ಅಭಿವೃದ್ಧಿಗಾಗಿ ಮತದಾನ ಮಾಡಬೇಕು.

ಪ್ರಸಾದ್ ಕಾಟೂರ್


ಮತದಾನ ಯಾಕೆ ಬೇಕು ?

ದಾನಗಳಲ್ಲಿ ಮತದಾನವು ಕೂಡ ಶ್ರೇಷ್ಠ ದಾನವಾಗಿದೆ. ನಮ್ಮ ಒಂದು ಮತ ಒಂದು ಉತ್ತಮ ದೇಶವನ್ನು ನಿರ್ಮಿಸುವಲ್ಲಿ ಪ್ರಧಾನ ಪಾತ್ರವಹಿಸುತ್ತದೆ. ಮತದಾನ ನಮ್ಮ ಹಕ್ಕು ನಾವು ಅದನ್ನು ಕಡ್ಡಾಯವಾಗಿ ಮಾಡಬೇಕು. ದೇಶದ ಅಭಿವೃದ್ಧಿಗಾಗಿ ಯಾರು ಶ್ರಮಿಸುತ್ತಾರೋ ಅವರ ಪಕ್ಷಕ್ಕೆ ಮತ ಹಾಕೋಣ. ನಮಗೆ ಬೇಕಾದ ನಾಯಕನನ್ನು ಆರಿಸಲು ಸಂವಿಧಾನವು ನಮಗೆ ಅವಕಾಶವನ್ನು ಕೊಟ್ಟಿದೆ ಆದುದರಿಂದ ಉತ್ತಮ ನಾಯಕರನ್ನೇ ಆಯ್ಕೆ ಮಾಡಬೇಕಾಗಿದೆ. ಸದಾ ದೇಶದ ಅಭಿವೃದ್ಧಿಗಾಗಿ ಶ್ರಮ ಪಡುವ ನಾಯಕ ಅಥವಾ ನಾಯಕಿಗೆ ನಿಮ್ಮ ಮತ ಹಾಕಿ. ದೇಶ ಅಭಿವೃದ್ಧಿಯೊಂದೇ ನಮ್ಮ ಗುರಿಯಾಗಿರಲಿ.

ಶೇಖರ.ಎಂ. ದೇಲಂಪಾಡಿ


ನಮ್ಮ ವಾಟ್ಸಪ್ ಗ್ರೂಪ್ ಸೇರಿ: ಇಲ್ಲಿ ಕ್ಲಿಕ್ ಮಾಡಿ


ಪಕ್ಷಕ್ಕಿಂತ ಅಭಿವೃದ್ದಿಗೆ ವ್ಯಕ್ತಿಯ ವ್ಯಕ್ತಿತ್ವ ಮುಖ್ಯ

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬ ನಾಗರಿಕ ಮತ ಚಲಾಯಿಸುವ ಹಕ್ಕನ್ನು ಹೊಂದಿರುತ್ತಾರೆ ಮತದಾನ ನಾಗರಿಕನ ಕರ್ತವ್ಯ ಪ್ರಜ್ಞೆಯನ್ನು ಜಾಗೃತಗೊಳಿಸುವ ಹಕ್ಕು ತನಗೆ ಬೇಕಾದ ವ್ಯಕ್ತಿಯನ್ನು ಚುನಾಯಿಸುವ ಮೂಲಕ ದೇಶದಲ್ಲಿ ಆ ವ್ಯಕ್ತಿಯ ಮೂಲಕ ಅಭಿವೃದ್ಧಿಯನ್ನು ಕಾಣಲು ಸಾಧ್ಯತೆ ಇದೆ ನಾಗರಿಕನಾಗಿ ನಾವು ನೀಡುವ ಮತ ಒಬ್ಬ ಶ್ರೇಷ್ಠ ವ್ಯಕ್ತಿಯನ್ನು ಚುನಾಯಿಸುವ ಮೂಲಕ ಸಮಾಜದಲ್ಲಿ ಅಶಾಂತಿಯನ್ನು ದೂರ ಮಾಡಿ ರಸ್ತೆ ಅಭಿವೃದ್ಧಿ ಗ್ರಾಮೀಣ ಪ್ರದೇಶದ ಸಮಸ್ಯೆಗಳ ಪರಿಹಾರಕ್ಕೆ ಆತ ಶ್ರಮಿಸಿದಲ್ಲಿ ನಾವು ನೀಡುವ ಮತ ಅತ್ಯಮೂಲ್ಯ ವಾಗುತ್ತದೆ ಮತದಾರರದ ನಾವು ಗಮನಿಸಬೇಕಾದ ಅಂಶವೆಂದರೆ ಚುನಾಯಿತ ಪ್ರತಿನಿಧಿ ಕೇವಲ ಚುನಾವಣೆ ಸಂದರ್ಭದಲ್ಲಿ ಮಾತ್ರ ನಮ್ಮನ್ನು ಸಂಪರ್ಕಿಸುವ ವ್ಯಕ್ತಿ ಆಗಿರಬಾರದು ಸೋತರು ನಮ್ಮ ನಡುವೆ ಕಂಡುಬರುವ ವ್ಯಕ್ತಿ ಸಮಾಜ ಸೇವಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಸಮಾಜದ ಕಷ್ಟ ಸುಖಗಳನ್ನು ಸಮಾನವಾಗಿ ಕಂಡು ಅಭಿವೃದ್ಧಿ ಯೋಜನೆಗಳ ಮತ್ತು ಸರ್ಕಾರದ ಸೌಲಭ್ಯ ಒದಗಿಸಲು ನೆರವಾದಲ್ಲಿ ಮುಂದಿನ ಚುನಾವಣೆಯಲ್ಲಿ ಪಕ್ಷಕ್ಕಿಂತ ವ್ಯಕ್ತಿ ಮುಖ್ಯ ಆಗಿರುವುದನ್ನು ನಾವು ಗಮನಿಸಬೇಕು

ದಿನೇಶ್ ವರಕೋಡಿ ಬಡಗಬೆಳ್ಳೂರು


ನನ್ನ ಸ್ವಾತಂತ್ರ್ಯ ಮತ್ತು ನಮ್ಮ ಮುಂದಿನ ಭದ್ರತೆ

ಮತದಾನದ ಸಮಯದಲ್ಲಿ ಮತದಾರರು ಒಂದು ನೆನಪಲ್ಲಿ ಇಟ್ಟುಕೊಳ್ಳಬೇಕು. ನೀವು ಓಟಿನ ಬಟನ್ ಒತ್ತಿ 7 ಸೆಕೆಂಡ್ ವರೆಗೆ ಕಡ್ಡಾಯ ಕಾದು ನೋಡಬೇಕು. ನೀವು ಹಾಕಿದ ಓಟು ಅದೇ ಚಿಹ್ನೆಗೆ ಬಿದ್ದಿದೆಯೇ ಎಂದು ನಿಂತು ನೋಡಲು ಅವಕಾಶ ಇದೆ ಬಟನ್ ಒತ್ತಿ ಸೌ0ಡ್ ಮಾಡಿದ ನಂತರ ಚಿಹ್ನೆಯ ದೀಪ ಉರಿಯುತ್ತೆ.ಯಾರದೇ ಒತ್ತಡ ಇಲ್ಲ. ಅವಸರ ಇಲ್ಲ. ಆರಾಮವಾಗಿ ಓಟು ಮಾಡಬಹುದು. ಒಂದು ವೇಳೆ ಇನ್ನೊಂದು ಚಿಹ್ನೆಯ ದೀಪ ಉರಿದರೆ ತಕ್ಷಣ ಅಲ್ಲೇ ಚುನಾವಣೆ ಅಧಿಕಾರಿಗಳಿಗೆ ದೂರು ಕೊಡಿ. ನಮ್ಮ ಮತ ನಮ್ಮ ಹಕ್ಕು. ಅದೇ ನನ್ನ ಸ್ವಾತಂತ್ರ್ಯ ಮತ್ತು ನಮ್ಮ ಮುಂದಿನ ಭದ್ರತೆ.
ಮತದಾನವು ಜನತೆಯು ಯಾವುದಾದರೂ ವಿಷಯ, ಅಥವಾ ಅಭ್ಯರ್ಥಿಗಳ ಬಗ್ಗೆ ತಮ್ಮ ನಿರ್ಣಯಗಳನ್ನು ಸೂಚಿಸಲು ಅನುವು ಮಾಡಿಕೊಡುವ ಒಂದು ಪ್ರಕ್ರಿಯೆ. ಜನತಂತ್ರಗಳ ಚುನಾವಣೆಗಳಲ್ಲಿ ಮತದಾನ ಪ್ರಮುಖ ಅಂಗ. ಮತದಾನ ಮಾಡುವುದು ಪ್ರತಿಯೊಬ್ಬ ಭಾರತೀಯರ ಹಕ್ಕು ಮತ್ತು ಕರ್ತವ್ಯ. ಮತದಾನ ಮಾಡಲು ಭಾರತೀಯ ಪ್ರಜೆ ಹದಿನೆಂಟು ವಯಸ್ಸಿನವನಾಗಿರಬೇಕು ಅಥವಾ ಹದಿನೆಂಟಕ್ಕು ಹೆಚ್ಚಿನ ವಯಸ್ಸಾಗಿರಬೇಕು.

ಯಕ್ಷ ಕೆ ಜೈನ್

Digiqole Ad

NEWS TEAM

ಈ ಸುದ್ದಿಗಳನ್ನೂ ಓದಿ