• 26 ಜುಲೈ 2024

ವಾರ್ತೆಗಳು : BREAKING NEWS

 ವಾರ್ತೆಗಳು : BREAKING NEWS
Digiqole Ad

ವಾರ್ತೆಗಳು

BREAKING NEWS

ವಿದ್ಯಾರ್ಥಿಗಳನ್ನು ಕಳುಹಿಸುವಂತೆ ಪಂಜಾಬ್ ಪತ್ರ

ಭಾರತದ 700 ವಿದ್ಯಾರ್ಥಿಗಳು ಕೆನಡಾದಿಂದ ಭಾರತಕ್ಕೆ ಮರಳಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಪಂಜಾಬ್ ಸರ್ಕಾರ ಇಂದು ಕೆನಡಾದ ಭಾರತೀಯ ಹಾಗೂ ಭಾರತದಲ್ಲಿರುವ ಕೆನಡಾ ರಾಯಭಾರಿಗಳಿಗೆ ಪತ್ರ ಬರೆದಿದೆ. ಕೆನಡಾದ ಕಾಲೇಜುಗಳು ನಕಲಿ ಪತ್ರ ಸ್ವೀಕರಿಸಿವೆ. ಟ್ರಾವೆಲ್ ಏಜನ್ಸಿ, ಭಾರತದಲ್ಲಿನ ಕೆನಡಾ ರಾಯಭಾರ ಕಚೇರಿ ಅಧಿಕಾರಿಗಳು & ಇತರೆ ಏಜೆನ್ಸಿಗಳ ವಂಚನೆಯಿಂದ ಮೋಸ ಹೋಗಿದ್ದು, ಅವರು ತುಂಬಾ ಮುಗ್ಧರು. ಹಾಗಾಗಿ ಅವರನ್ನು ಜಾಗರೂಕತೆಯಿಂದ ಕಳುಹಿಸಿಕೊಡಿ ಎಂದು ಮನವಿ ಮಾಡಿದೆ.


ಕೊಂಬಿಂಗ್ ಕಾರ್ಯಾಚರಣೆ: 35 ಶಸ್ತ್ರಾಸ್ತ್ರ ಜಪ್ತಿ!

ಮಣಿಪುರದಲ್ಲಿ ಕೊಂಬಿಂಗ್ ಕಾರ್ಯಾಚರಣೆ ಮಾಡುವ ಸಂದರ್ಭದಲ್ಲಿ ಸುಮಾರು 35 ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಭದ್ರತಾ ಪಡೆಗಳ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಸೇನೆ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಗುಡ್ಡಗಾಡಿನಲ್ಲಿ ಯುದ್ಧಕ್ಕೆ ಬಳಸುವ ಮಳಿಗೆಗಳು ಸೇರಿ 35 ಶಸ್ತ್ರಾಸ್ತ್ರಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆಂದು ತಿಳಿಸಿದ್ದಾರೆ. ಹಲವು ದಿನಗಳಿಂದ ನಡೆಯುತ್ತಿದ್ದ ಮಣಿಪುರ ಹಿಂಸಾಚಾರದ ಬಗ್ಗೆ ಗೃಹ ಸಚಿವ ಶಸ್ತ್ರಾಸ್ತ್ರಗಳನ್ನು ಪೊಲೀಸರಿಗೆ ಒಪ್ಪಿಸುವಂತೆ ಹೇಳಿದ್ದರು.


ಭಯಾನಕ ಹೆದ್ದಾರಿ..6 ತಿಂಗಳಲ್ಲಿ 148 ಮಂದಿ ಸಾವು

ಬೆಂಗಳೂರಿನಿಂದ ಮೈಸೂರಿಗೆ ಸಂಪರ್ಕ ಕಲ್ಪಿಸುವ ದಶಪಥ ಹೆದ್ದಾರಿಯಲ್ಲೀಗ ಸಾಲು ಸಾಲು ಅಪಘಾತ ಪ್ರಕರಣಗಳು ವರದಿಯಾಗುತ್ತಿವೆ. ಈ ಸಂಬಂಧ ಆಘಾತಕಾರಿ ಅಂಕಿ-ಅಂಶವೊಂದು ಬಹಿರಂಗವಾಗಿದೆ. ಈ ಎಕ್ಸ್‌ಪ್ರೆಸ್ ವೇಯಲ್ಲಿ ಇಲ್ಲಿಯವರೆಗೆ 335ಕ್ಕೂ ಹೆಚ್ಚು ಅಪಘಾತಗಳು ಸಂಭವಿಸಿದ್ದು, 148 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಮಾರ್ಚ್ 12ರ ನಂತರ 10 ಆಕ್ಸಿಡೆಂಟ್‌ಗಳಾಗಿದ್ದು, ನಾಲ್ವರು ಬಲಿಯಾಗಿದ್ದಾರೆ. ಹೀಗಾಗಿ ಈ ದಶಪಥ ಹೆದ್ದಾರಿ ಅವೈಜ್ಞಾನಿಕವಾಗಿದೆಯಾ ಎಂಬ ಪ್ರಶ್ನೆ ಉದ್ಭವವಾಗುತ್ತಿದೆ.


ಆಧಾರ್ ಪ್ಯಾನ್ ಜತೆ ಲಿಂಕ್ ಆಗಿದೆಯೇ ಪರಿಶೀಲಿಸಿ

ಆಧಾರ್ ಜತೆ ಪ್ಯಾನ್ ಲಿಂಕ್ ಮಾಡಲು ಕೊನೆದಿನ ಜೂ.30, ನಿಮ್ಮ ಆಧಾರ್ ಅನ್ನು ಪ್ಯಾನ್ ಜತೆ ಲಿಂಕ್ ಮಾಡಲಾಗಿದೆಯೇ ಅಥವಾ ಇಲ್ಲವೇ ಎಂದು ನೋಡಲು https://www .incometax.gov.in/iec/foportal/Loen Roso ಲಿಂಕ್ ಆಧಾರ್ ಸ್ಟೇಟಸ್ ಮೇಲೆ ಕ್ಲಿಕ್ ಮಾಡಿ. ಈಗ ನಿಮ್ಮ ಮುಂದೆ ಒಂದು ಪುಟ ತೆರೆದುಕೊಳ್ಳುತ್ತದೆ. ಅದರಲ್ಲಿ ನಿಮ್ಮ ಪ್ಯಾನ್ ಮತ್ತು ಆಧಾರ್ ಕಾರ್ಡ್ ಸಂಖ್ಯೆ ನಮೂದಿಸಿ. ಈಗ View Aadhaar Link Status ಮೇಲೆ ಕ್ಲಿಕ್ ಮಾಡಿ, ಆಧಾರ್ ಲಿಂಕ್ ಹೊಂದಿದ್ದರೆ, ಅದರ ಮಾಹಿತಿ ಪಡೆಯಬಹುದು.


Drone ಪೈಲಟ್ ಆಗಲು ಬಯಸಿದ್ದೀರಾ?

ಡ್ರೋನ್ ವ್ಯವಸ್ಥೆ ವೇಗವಾಗಿ ವಿಸ್ತರಿಸುತ್ತಿದೆ.

ಛಾಯಾಗ್ರಹಣದಿಂದ ಹವಾಮಾನ ಸಂಶೋಧನೆ, ಸಾರಿಗೆಯಿಂದ ಕೃಷಿ ಕೆಲಸದವರೆಗೆ ಎಲ್ಲವೂ ಬದಲಾಗುತ್ತಿದೆ. ಹೀಗಾಗಿ, ಡೋನ್ ಪೈಲಟ್‌ಗೆ ಬೇಡಿಕೆ ಹೆಚ್ಚುತ್ತಿದೆ. ಐರೋಪ್ಯ ವಿಮಾನಯಾನ ದೈತ್ಯ ಏರ್‌ಬಸ್ ಡೋನ್ ಪೈಲಟ್‌ಗೆ ವಿಶೇಷ ತರಬೇತಿ ನೀಡುತ್ತಿದೆ. ಇದು 5 ದಿನಗಳ ಸರ್ಟಿಫಿಕೇಟ್ ಕೋರ್ಸ್ ಆಗಿದ್ದು, DGCA ಅನುಮೋದನೆ ನೀಡಿದೆ. ಮೈಕ್ರೋ & ಸಣ್ಣ ವರ್ಗದ ಡೋನ್ ಕೋರ್ಸ್‌ಗಳು ಜೂನ್ 26ರಿಂದ ಬೆಂಗಳೂರಿನ ಏರ್‌ಬಸ್ ತರಬೇತಿ ಕೇಂದ್ರದಲ್ಲಿ ಪ್ರಾರಂಭವಾಗಲಿದೆ.


ಒಂಟಿ ಪುರುಷರಿಗೆ ರಜೆ..ರಾಜ್ಯ ಸರ್ಕಾರದ ಮಹತ್ವದಆದೇಶ

ಇನ್ನು ಮುಂದೆ ಮಹಿಳೆಯರಿಗೆ ಮಾತ್ರವಲ್ಲ, ಒಂಟಿ ಪೋಷಕರಾಗಿರುವ ಸರ್ಕಾರಿ ಪುರುಷ ನೌಕರರಿಗೂ ಶಿಶುಪಾಲನಾ ರಜೆ ಸಿಗಲಿದೆ. ಈ ಬಗ್ಗೆ ರಾಜ್ಯ ಸರ್ಕಾರ ತಕ್ಷಣದಿಂದ ಜಾರಿಗೆ ಬರುವಂತೆ ಮಹತ್ವದ ಆದೇಶ ಹೊರಡಿಸಿದ್ದು, ಒಂಟಿ ಪುರುಷರೂ ಸಹ ಒಟ್ಟು 180 ದಿನ ಶಿಶುಪಾಲನಾ ರಜೆ ಪಡೆಯಲು ಅರ್ಹರಾಗಿದ್ದಾರೆ. ಒಂಟಿ ಪೋಷಕರಾಗಿರುವ ಅವಿವಾಹಿತ, ವಿವಾಹ-ವಿಚ್ಛೇದಿತ ಅಥವಾ ವಿದುರ ಪುರುಷ ರಾಜ್ಯ ಸರ್ಕಾರಿ ನೌಕರರಿಗೆ ಇದು ಅನ್ವಯವಾಗಲಿದ್ದು, ಆರ್ಥಿಕ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಈ ಆದೇಶ ಹೊರಡಿಸಿದ್ದಾರೆ.


ಆಗಸ್ಟ್‌ನಲ್ಲಿ ಮಾನವ ಸಹಿತ ಬಾಹ್ಯಾಕಾಶ ಯಾನ..

ಭಾರತದ ಮೊದಲ ಮಾನವ ಸಹಿತ ಬಾಹ್ಯಾಕಾಶ ಯಾನಕ್ಕೆ ಆಗಸ್ಟ್‌ನಲ್ಲಿ ಪ್ರಥಮ ಪರೀಕ್ಷೆ ನಡೆಯಲಿದೆ ಎಂದು ಇಸ್ರೋ ಸಂಸ್ಥೆ ಅಧ್ಯಕ್ಷ ಎಸ್. ಸೋಮನಾಥ್ ಹೇಳಿದ್ದಾರೆ. ಈ ಯಾನದ ಪರೀಕ್ಷೆಯನ್ನು ಜುಲೈ ತಿಂಗಳಲ್ಲೇ ಮಾಡಬೇಕಾಗಿತ್ತು. ಬದಲಾಗಿ ಇದೀಗ ಆಗಸ್ಟ್‌ನಲ್ಲಿ ಮಾಡಲು ನಿರ್ಧರಿಸಲಾಗಿದೆ. ಕೋವಿಡ್ ಕಾರಣದಿಂದ ಒಂದೂವರೆ ವರ್ಷ ವಿಳಂಬವಾಗಿದ್ದು, ಈ ಯೋಜನೆಯನ್ನು ಸಾವಧಾನದಿಂದ ಮುನ್ನಡೆಸುವುದೇ ನಮ್ಮ ಗುರಿಯಾಗಿದೆ. ಹಾಗಾಗಿ ಆಗಸ್ಟ್‌ನಲ್ಲಿ ಚಾಲನೆ ನೀಡಲಾಗುವುದು ಎಂದು ಸುದ್ದಿ ಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.


ಅಮರನಾಥ ಯಾತ್ರೆ ಕುರಿತು ಉನ್ನತ ಮಟ್ಟದ ಸಭೆ

ಶೀಘ್ರದಲ್ಲೇ ಆರಂಭವಾಗಲಿರುವ ಅಮರನಾಥ ಯಾತ್ರೆಯ ಸಿದ್ಧತೆಗಳ ಜೊತೆಗೆ ರಕ್ಷಣಾ ಕಾರ್ಯಕ್ಕೆ ಸಂಬಂಧಿತ ವಿಷಯಗಳ ಕುರಿತು ಗೃಹ ಸಚಿವ ಅಮಿತ್ ಶಾ ಅವರ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಭೆ ನಡೆಯುತ್ತಿದೆ. ಈ ಸಭೆಯಲ್ಲಿ ಯಾತ್ರಾರ್ಥಿಗಳ ಭದ್ರತೆ ಮತ್ತು ಇತರ ವ್ಯವಸ್ಥೆಗಳ ಕುರಿತು ಅಧಿಕಾರಿಗಳಿಗೆ ಅಮಿತ್ ಶಾ ನಿರ್ದೇಶನ ನೀಡಿದ್ದಾರೆ. ಜುಲೈ 1ರಂದು ಆರಂಭವಾಗಲಿರುವ ಅಮರನಾಥ ಯಾತ್ರೆಯು 62 ದಿನಗಳ ಕಾಲ ನಡೆಯಲಿದ್ದು, ಆಗಸ್ಟ್ 31ಕ್ಕೆ ಮುಕ್ತಾಯಗೊಳ್ಳಲಿದೆ.


 


ಉಚಿತವಾಗಿ ನೋಡಿ.. ಕ್ರಿಕೆಟ್ ಫ್ಯಾನ್ಸ್‌ಗೆ ಗುಡ್‌ನ್ಯೂಸ್

 

ಏಷ್ಯಾಕಪ್ & ICC ಪುರುಷರ ODI ವಿಶ್ವಕಪ್ 2023 ಅನ್ನು ಉಚಿತವಾಗಿ ವೀಕ್ಷಿಸಬಹುದಾಗಿದೆ. ಅಭಿಮಾನಿಗಳು ಈ ಎರಡೂ ಪಂದ್ಯಾವಳಿಗಳನ್ನು ಉಚಿತವಾಗಿ ವೀಕ್ಷಿಸಬಹುದಾಗಿದೆ ಎಂದು OTT ಪ್ಲಾಟ್‌ಫಾರ್ಮ್ Disney+ Hotstar ಘೋಷಿಸಿದೆ. Disney+ Hotstar ನಲ್ಲಿ ಏಷ್ಯಾಕಪ್ & ವಿಶ್ವಕಪ್ ವೀಕ್ಷಿಸಲು ಬಳಕೆದಾರರು ಚಂದಾದಾರರಾಗುವ ಅಗತ್ಯವಿಲ್ಲ ಎಂದಿದೆ. ಐಪಿಎಲ್ ಟೂರ್ನಿಯನ್ನು ಉಚಿತವಾಗಿ ಸ್ಟೀಮ್ ಮಾಡಿದ OTT ಪ್ರತಿಸ್ಪರ್ಧಿ ಜಿಯೋ ಸಿನಿಮಾದ ನಿರ್ಧಾರವನ್ನೇ ಇದು ಅನುಸರಿಸುತ್ತಿದೆ.


ರಮೇಶ್ ಜಾರಕಿಹೊಳಿ ನಿವಾಸದ ಮೇಲೆ ಲಕ್ಷ್ಮೀ ಹೆಬ್ಬಾಳರ್‌ಗೆ ಕಣ್ಣು!

ಸಿದ್ದರಾಮಯ್ಯ ಸರ್ಕಾರದ ಹಲವು ಸಚಿವರಿಗೆ ಸರ್ಕಾರಿ ಬಂಗಲೆ ನೀಡಲಾಗಿದೆ. ಅದರಂತೆ, ಸಚಿವೆ ಲಕ್ಷ್ಮೀ ಹೆಬ್ಬಾಳ‌, ಮಾಜಿ ಸಚಿವ ರಮೇಶ್ ಜಾರಕಿಹೊಳಿ ಉಳಿದುಕೊಂಡಿದ್ದ ನಿವಾಸದ ಮೇಲೆ ಕಣ್ಣಿಟ್ಟಿದ್ದಾರೆ. ಸೆವೆನ್ ಮಿನಿಸ್ಟರ್ಸ್ ಕ್ವಾಟರ್ಸ್‌ನಲ್ಲಿರುವ ಬಲಭಾಗದ 4ನೇ ನಿವಾಸದಲ್ಲೇ ಉಳಿದುಕೊಳ್ಳಲು ಲಕ್ಷ್ಮೀ ಹೆಬ್ಬಾಳರ್ ನಿರ್ಧರಿಸಿದ್ದಾರೆ ಎನ್ನಲಾಗಿದೆ. ಈ ನಿವಾಸವನ್ನು ಅದೃಷ್ಟದ ನಿವಾಸ ಎಂದೇ ಹೇಳಲಾಗುತ್ತಿದೆ. ಸಮ್ಮಿಶ್ರ ಸರ್ಕಾರ ಪತನದ ವೇಳೆ ಜಾರಕಿಹೊಳಿ ಇದೇ ಬಂಗಲೆಯಲ್ಲಿದ್ದರು.


81ನೇ ವಯಸ್ಸಿನಲ್ಲಿ ತಾತನ ಅದ್ಭುತ ಸಾಧನೆ

ಕಲಿಕೆಗೆ ವಯಸ್ಸಿನ ಹಂಗಿಲ್ಲ ಎಂಬುದನ್ನು ಬಾಗಲಕೋಟೆಯ 81 ವರ್ಷದ ಹಿರಿಯ ನಾಗರಿಕರೊಬ್ಬರು ತೋರಿಸಿಕೊಟ್ಟಿದ್ದಾರೆ. ನಿಂಗಯ್ಯ ಒಡೆಯರ ‘ಇಗೋ’ ಪರೀಕ್ಷೆಯಲ್ಲಿ MA ಇಂಗ್ಲಿಷ್ ಅಂತಿಮ ವರ್ಷದ ಪರೀಕ್ಷೆ ಬರೆದಿದ್ದಾರೆ. ಈಗಾಗಲೇ ಇವರು ಕನ್ನಡ, ಹಿಂದಿ ಮತ್ತು ಇಂಗ್ಲಿಷ್ ವಿಷಯಗಳಲ್ಲಿ ಕರ್ನಾಟಕ ವಿವಿಯಿಂದ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ನಿಂಗಯ್ಯಗೆ ಓರ್ವ ಹೆಣ್ಣು, ಇಬ್ಬರು ಗಂಡು ಮಕ್ಕಳಿದ್ದು, ಐವರು ಮೊಮ್ಮಕ್ಕಳಿದ್ದಾರೆ. ಇಳಿ ವಯಸ್ಸಿನಲ್ಲೂ ಇವರ ಓದುವ ಉತ್ಸಾಹ ಸರ್ವರಿಗೂ ಮಾದರಿಯಾಗಿದೆ.


ಗಮನಿಸಿ:ಜುಲೈ 1ರಿಂದ ಅಕೌಂಟ್ ಬಂದ್, 10,000 ದಂಡ!

ನೀವು ಇನ್ನೂ ನಿಮ್ಮ ಪ್ಯಾನ್ ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡದಿದ್ದರೆ, ಗಡುವಿನ ಬಳಿಕ ನಿಮ್ಮ ಬ್ಯಾಂಕ್ ಖಾತೆ ಫ್ರೀಜ್ ಆಗುವ ಸಾಧ್ಯತೆಯಿದೆ. ಆಧಾರ್‌ನೊಂದಿಗೆ ಪ್ಯಾನ್ ಲಿಂಕ್ಗೆ ಜೂನ್ 30 ಕೊನೆದಿನ. ಆದಾಯ ತೆರಿಗೆ ಇಲಾಖೆಯು ಪ್ಯಾನ್ ಕಾರ್ಡ್ ಹೊಂದಿರುವವರಿಗೆ ತಕ್ಷಣವೇ ಆಧಾರ್‌ನೊಂದಿಗೆ ಪ್ಯಾನ್ ಲಿಂಕ್ ಮಾಡುವಂತೆ ಎಚ್ಚರಿಸಿದೆ. ಇಲ್ಲದಿದ್ದರೆ ಪ್ಯಾನ್ ಕಾರ್ಡ್ ನಿಷ್ಕ್ರಿಯವಾಗುತ್ತದೆ. ಜುಲೈ 1ರ ನಂತರ ನಿಷ್ಕ್ರಿಯ ಪ್ಯಾನ್ ಕಾರ್ಡ್ ಬಳಸಿದರೆ 10,000ರೂ. ದಂಡ ಕೂಡ ವಿಧಿಸಲು ಅವಕಾಶವಿದೆ.



ಮಾಜಿ ಸಚಿವ ಸುಧಾಕರ್ಿಗೆ ಬಿಗ್ ಶಾಕ್ ಕೊಟ್ಟ ಸಿಎಂ

 

 

ಮಾಜಿ ಸಚಿವ ಡಾ. ಕೆ. ಸುಧಾಕರ್ ಅವರಿಗೆ CM ಸಿದ್ದರಾಮಯ್ಯ ಶಾಕ್ ಕೊಟ್ಟಿದ್ದಾರೆ. ಅವರು ಸಚಿವರಾಗಿದ್ದ ವೇಳೆ ನೀಡಿದ್ದ ಟೆಂಡರ್‌ಗಳನ್ನು ರಾಜ್ಯ ಸರ್ಕಾರ ರದ್ದು ಮಾಡಿದೆ. ಆರೋಗ್ಯ ಇಲಾಖೆಯನ್ನು ಕ್ಲೀನ್ ಮಾಡುವಂತೆ ಸಿಎಂ ಸೂಚಿಸಿರುವ ಹಿನ್ನೆಲೆಯಲ್ಲಿ ಸುಧಾಕರ್ ಕಾಲದ ಬಹುತೇಕ ಟೆಂಡರ್‌ಗಳನ್ನು ಕ್ಯಾನ್ಸಲ್ ಮಾಡುತ್ತಿರುವುದಾಗಿ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಕೋಟ್ಯಂತರ ರೂ. ಭ್ರಷ್ಟಾಚಾರದ ಆರೋಪ ಹಿನ್ನೆಲೆ ಸರ್ಕಾರ ಈ ಮಹತ್ವದ ನಿರ್ಧಾರ ಮಾಡಿದೆ.


ಕೆಲಸ ಮಾಡದವರಿಗೆ ಗೇಟ್ ಪಾಸ್: ಕುಮಾರಸ್ವಾಮಿ ವಾರ್ನಿಂಗ್

ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕೇವಲ 19 ಸ್ಥಾನ ಗೆದ್ದಿರುವ ಜೆಡಿಎಸ್‌ಗೆ ಮತ್ತೆ ಶಕ್ತಿ ತುಂಬಲು ಮಾಜಿ ಸಿಎಂ ಹೆಚ್‌ಡಿಕೆ ರಣತಂತ್ರ ರೂಪಿಸುತ್ತಿದ್ದಾರೆ. ಮುಂಬರುವ ಲೋಕಸಭೆ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸಲು ಸಂಕಲ್ಪ ಮಾಡಿರುವ ಕುಮಾರಸ್ವಾಮಿ, ಪಕ್ಷ ಸಂಘಟನೆ ವಿಷಯದಲ್ಲಿ ಯಾರಾದರೂ ಆಲಸ್ಯ ತೋರಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ. ಪದಾಧಿಕಾರಿಗಳನ್ನು ಮುಲಾಜಿಲ್ಲದೆ ಬದಲಾಯಿಸುತ್ತೇವೆ ಎಂದಿದ್ದಾರೆ. ಈ ಮೂಲಕ ಭಾರೀ ಬದಲಾವಣೆಯ ಸುಳಿವು ನೀಡಿದ್ದಾರೆ.


ನನಗೆ ಬೆದರಿಕೆ ಕರೆಗಳು ಬಂದಿವೆ: ಸಂಜಯ್ ರಾವತ್

ತನಗೆ ಮತ್ತು ತನ್ನ ಸಹೋದರ ಸುನಿಲ್ ರಾವತ್ ಅವರಿಗೆ ಕೊಲೆ ಬೆದರಿಕೆ ಕರೆಗಳು ಬಂದಿವೆ ಎಂದು ಶಿವಸೇನೆ (ಯುಬಿಟಿ) ಸಂಸದ ಸಂಜಯ್ ರಾವತ್ ಹೇಳಿದ್ದಾರೆ. ಬೆದರಿಕೆ ಹಾಕುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮಹಾರಾಷ್ಟ್ರ ಸರ್ಕಾರವನ್ನು ಅವರು ಕೋರಿದ್ದಾರೆ. ಇತ್ತೀಚೆಗೆ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರಿಗೂ ಬೆದರಿಕೆ ಕರೆಗಳು ಬಂದಿದ್ದವು. ಪ್ರತಿಪಕ್ಷಗಳನ್ನು ಭಯಭೀತಗೊಳಿಸುವ ತಂತ್ರವಾಗಿ ಬೆದರಿಕೆಗಳನ್ನು ಮಾಡುತ್ತಿದ್ದಾರೆ ಎಂದು ರಾವತ್ ಟೀಕಿಸಿದ್ದಾರೆ.


ಪಿಯುಸಿ ಪಾಸಾದವರಿಗೆ ಸುವರ್ಣಾವಕಾಶ

ಭಾರತೀಯ ನೌಕಾಪಡೆಯು 1365 ಅಗ್ನಿವೀರ್ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಮತ್ತು ಅರ್ಹ

 

ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

 

ಆಯ್ಕೆಯಾದ ಅಭ್ಯರ್ಥಿಗಳು ನೌಕಾಪಡೆಯಲ್ಲಿ 4 ವರ್ಷ ಸೇವೆ ಸಲ್ಲಿಸಲಿದ್ದಾರೆ.

 

ಅರ್ಹತೆ: ಪಿಯುಸಿ

 

ಆಯ್ಕೆ ಪ್ರಕ್ರಿಯೆ: CBT, ಲಿಖಿತ ಪರೀಕ್ಷೆ, ದೈಹಿಕ, ವೈದ್ಯಕೀಯ ಪರೀಕ್ಷೆ

 

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಜೂನ್ 15

 

joinindiannavy.gov.in


ಡಿಕೆಶಿಗೆ ಹೈಕೋರ್ಟ್‌ನಲ್ಲಿ ರಿಲೀಫ್

ಮೇಕೆದಾಟು ಪಾದಯಾತ್ರೆ ವೇಳೆ DCM ಡಿಕೆ ಶಿವಕುಮಾರ್ ಅವರ ವಿರುದ್ಧ ದಾಖಲಾಗಿದ್ದ ಪ್ರಕರಣ ರದ್ದಾಗಿದೆ. ಪಾದಯಾತ್ರೆ ವೇಳೆ ಕೋವಿಡ್-19 ನಿಯಮಾವಳಿ ಉಲ್ಲಂಘನೆ ಹಿನ್ನೆಲೆಯಲ್ಲಿ ವಿವಿಧ ಠಾಣೆಗಳಲ್ಲಿ ಒಟ್ಟು 8 ಪ್ರಕರಣಗಳು ದಾಖಲಾಗಿದ್ದವು. ಅವುಗಳಲ್ಲಿ ಒಂದನ್ನು ಹೈಕೋರ್ಟ್ ರದ್ದು ಮಾಡಿದೆ. ಮತ್ತೆರಡು ಪ್ರಕರಣಗಳ ತನಿಖೆಗೆ ತಡೆಯಾಜ್ಞೆ ನೀಡಿದ್ದರಿಂದ ಡಿಕೆಶಿಗೆ ತುಸು ನಿರಾಳತೆ ಸಿಕ್ಕಿದೆ. ಎಲ್ಲ ಪ್ರಕರಣ ರದ್ದು ಮಾಡುವಂತೆ ಕೋರಿ ಡಿಕೆಶಿ ಪರ ವಕೀಲರು ಅರ್ಜಿ ಸಲ್ಲಿಸಿದ್ದರು.

 

ನನ್ನನ್ನು ಕೊಲ್ಲುವುದಕ್ಕೆ ಅಕ್ಷಯ್ ಕುಮಾರ್ ಸುಪಾರಿ’

ನನ್ನನ್ನು ಕೊಲ್ಲುವುದಕ್ಕಾಗಿಯೇ ಬಾಲಿವುಡ್ ನಟ ಅಕ್ಷಯ್ ಕುಮಾರ್ ಸುಪಾರಿ ಕೊಟ್ಟಿದ್ದರು ಎಂದು ನಟ ಕಮಲ್ ಖಾನ್ ಆರೋಪಿಸಿದ್ದಾರೆ. ಈ ಬಗ್ಗೆ ಟ್ವಿಟ್ ಮಾಡಿ, ಬಾಲಿವುಡ್‌ನಲ್ಲಿ ನನ್ನ ಜತೆ ಹಲವಾರು ಸ್ನೇಹಿತರು ಇದ್ದಾರೆ. ಆದರೆ ಅಕ್ಷಯ್ ಕುಮಾರ್ ನನ್ನ ಮೇಲೆ ದ್ವೇಷ ಸಾಧಿಸುತ್ತಿದ್ದಾರೆ. ನನ್ನ ಸಾವು ಬಯಸುತ್ತಿದ್ದಾರೆ. ಅಲ್ಲದೆ, ಜೈಲಿಗೆ ಕಳುಹಿಸಿ ಅಲ್ಲಿಯೇ ಸಾಯಿಸಲು ಪ್ರಯತ್ನ ಪಡುತ್ತಿದ್ದಾರೆಂದು ಟೀಟ್‌ನಲ್ಲಿ ಬರೆದುಕೊಂಡಿದ್ದಾರೆ. ಇವರು ಈ ಹಿಂದೆ ಅನೇಕ ನಟರ ಬಗ್ಗೆಯೂ ಟ್ವಿಟ್ ಮಾಡಿದ್ದರು.

ರಾಜ್ಯದ 224 ಶಾಸಕರಿಗೂ ಡೆಡ್‌ಲೈನ್ ಫಿಕ್ಸ್

 

ರಾಜ್ಯದ ಶಾಸಕರಿಗೆ ಲೋಕಾಯುಕ್ತ ಅಧಿಕಾರಿಗಳು ಎಚ್ಚರಿಕೆ ನೀಡಿದ್ದು, ಜೂನ್ 30ರೊಳಗೆ ಆಸ್ತಿ ವಿವರ ಸಲ್ಲಿಸಲು ಸೂಚನೆ ನೀಡಿದೆ. ಹಿಂದಿನ ಬಾರಿ ಆಸ್ತಿ ವಿವರ ಸಲ್ಲಿಸಿದ್ದೇವೆ ಎಂದು ಸುಮ್ಮನೆ ಕೂರುವಂತಿಲ್ಲ. ಪುನರ್ ಆಯ್ಕೆಯಾದ ಶಾಸಕರೂ ಈ ಬಾರಿಯ ಆಸ್ತಿ ವಿವರ ಸಲ್ಲಿಸಬೇಕು. ಇಲ್ಲದಿದ್ದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಲೋಕಾಯುಕ್ತ ಕಚೇರಿ ಹೇಳಿದೆ. ಹಿಂದಿನ ಬಾರಿ ನೋಟಿಸ್ ಕಳಿಸಿದರೂ ಶಾಸಕರು ಪ್ರತಿಕ್ರಿಯೆ ನೀಡಿಲ್ಲ ಎಂದು ಲೋಕಾಯುಕ್ತ ಹೇಳಿದೆ.

 

Digiqole Ad

NEWS TEAM

ಈ ಸುದ್ದಿಗಳನ್ನೂ ಓದಿ